ಪಾಟ್ನಾ: ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಮತ್ತು ಬಂಗ್ಲಾದೇಶಗಳ ಪಕ್ಕದಲ್ಲಿ ಪ್ರತ್ಯೇಕ ನಾಡು ಬೇಕು ಎಂದು ಬಿಹಾರದ ಪ್ರೊಫೆಸರ್ವೊಬ್ಬರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಆರೋಪಿ ಪ್ರೊಫೆಸರ್ ಖುರ್ಷೀದ್ ಅಲಮ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.
ಖುರ್ಷೀದ್ ಅಲಮ್ ಅವರು ಬಿಹಾರದ ಜೈ ಪ್ರಕಾಶ್ ಯೂನಿವರ್ಸಿಟಿಗೆ ಸೇರಿದ ಸಿವನ್ ಜಿಲ್ಲೆಯಲ್ಲಿನ ನಾರಾಯಣ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಪೊಲಿಟಿಕಲ್ ಸೈನ್ಸ್ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ.
‘ಯುನೈಟೆಡ್ ಪಾಕಿಸ್ತಾನ್ ಅಂಡ್ ಬಾಂಗ್ಲಾದೇಶ್ ಜಿಂದಾಬಾದ್’ (ಅಖಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಜೈ) ಎಂದು ಒಂದು ಪೋಸ್ಟ್ನಲ್ಲಿ ಬರೆದಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ಅವರು, ‘ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪಕ್ಕದಲ್ಲಿ ಪ್ರತ್ಯೇಕ ನಾಡು ಬೇಕು’ ಎಂದು ಅಭಿಪ್ರಾಯಪಟ್ಟಿದ್ಧಾರೆ. ಸದ್ಯ ಈ ಎರಡೂ ಪೋಸ್ಟ್ಗಳನ್ನು ಅವರು ಡಿಲೀಟ್ ಮಾಡಿದ್ದಾರೆ.
ಈ ಪೋಸ್ಟ್ಗಳು ಡಿಲೀಟ್ ಆಗುವ ಮುನ್ನ ಕಾಲೇಜಿನ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ತಮ್ಮ ಗುರುವಿನ ವರ್ತನೆ ಬಗ್ಗೆ ಸಿಡಿಮಿಡಿಗೊಂಡ ಅವರು ಖುರ್ಷಿದ್ ಅಲಂ ಅವರ ಪ್ರತಿಕೃತಿ ದಹನ ಮಾಡಿ ಪೋಸ್ಟ್ಗಳನ್ನು ಡಿಲೀಟ್ ಮಾಡುವಂತೆ ಆಗ್ರಹಿಸಿದ್ದರು. ಅದಾದ ಬಳಿಕ ಅಲಂ ತಮ್ಮ ಪೋಸ್ಟ್ ಅಳಿಸಿದ್ದರು.
ಇನ್ನು, ಪ್ರೊಫೆಸರ್ ಖುರ್ಷಿದ್ ಅಲಂ ಅವರು ತಮ್ಮ ಪೋಸ್ಟ್ ಬಗ್ಗೆ “ನನ್ನ ಬರಹಗಳ ಮೂಲಕ ಯಾರದ್ದೇ ಭಾವನೆಗೆ ಧಕ್ಕೆ ತರಲು ಯತ್ನಿಸಿಲ್ಲ. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದೂ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.
ಅದೇ ಉಸುರಿನಲ್ಲಿ ಭಾರತದಲ್ಲಿ ಮುಸ್ಲಿಮರಿಗೆ ಸುರಕ್ಷಿತ ವಾತಾವರಣ ಇಲ್ಲ ಎಂದೂ ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.