ಬೀದರ್: ಇತ್ತೀಚೆಗೆ ಯುವಕ ಯುವತಿಯರು ಯೂಟ್ಯೂಬ್ ವಿಡಿಯೋ ಮಾಡುತ್ತಾರೆ. ಅದೇ ರೀತಿ ವಿದೇಶಿಯರು ಕೂಡ ಭಾರತಕ್ಕೆ ಬಂದು ಇಲ್ಲಿ ಸುತ್ತಾಡಿ ವಿಡಿಯೋ ಮಾಡಿ ಭಾರತದ ಆಹಾರ ಆತಿಥ್ಯದ ಕುರಿತು ಜಗತ್ತಿನೆಲ್ಲೆಡೆ ವಿಷಯ ಹಂಚುತ್ತಾರೆ. ಆದರೆ ಹಲವು ಕಡೆ ಇಂತಹ ವಿದೇಶ ಯುವಕ ಯುವತಿಯರಿಗೆ ಕಹಿ ಅನುಭವಗಳು ಆಗುತ್ತದೆ.
ಅಂತಹುದೇ ಘಟನೆ ಪುಣೆಯಲ್ಲಿ ನಡೆದಿದ್ದು, ಕಪಿಚೇಷ್ಟೆ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಪುಣೆ ನಗರಕ್ಕೆ ಭೇಟಿ ನೀಡಿದ್ದ ಕೊರಿಯನ್ ಮೂಲದ ಯುವತಿ ಭಾರತದ ಬಗ್ಗೆ ಹತ್ತು ಹಲವು ಕುತೂಹಲಕಾರಿ ಸಂಗತಿಗಳ ವಿಡಿಯೋ ಮಾಡುತ್ತಿದ್ದರು ಈ ವೇಳೆ ಪುಣೆಯ ಮಾರ್ಕೆಟ್ನಲ್ಲಿ ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರನ್ನು ಮಾತನಾಡಿಸುತ್ತಿದ್ದಾಗ ಯುವಕನೊಬ್ಬ ಆಕೆಯನ್ನು ತಬ್ಬಿಕೊಂಡು ಮುಜುಗರ ಉಂಟಾಗುವಂತೆ ಮಾಡಿದ್ದಾನೆ.
ಸದ್ಯ ಕೊರಿಯನ್ ಮೂಲದ ಯೂಟ್ಯೂಬರ್ಗೆ ಕಿರುಕುಳ ಆರೋಪದ ಮೇಲೆ ಪಿಂಪ್ರಿ ಚಿಂಚ್ವಾಡ್ ಪೊಲೀಸರು ರಾವೆಟ್ ಪ್ರದೇಶದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಭರತ್ ಕರಂರಾವ್ ಹುನುಸ್ನಾಲೆ ಎಂದು ಗುರುತಿಸಲಾಗಿದ್ದು, ಪಿಂಪ್ರಿ ಚಿಂಚ್ವಾಡ್ ಪೊಲೀಸ್ನ ಆಂಟಿ ಗುಂಡಾ ಸ್ಕ್ವಾಡ್ ತಂಡವು ಆರೋಪಿಯನ್ನು ಬಂಧಿಸಿದೆ.
ಮಂಗಳವಾರ ಕೊರಿಯಾದ ವ್ಲಾಗರ್ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ಪೊಲೀಸರು ಆರೋಪಿ ಭರತ್ ಕರಂರಾವ್ ಹುನುಸ್ನಾಲೆಯನ್ನು ಬಂಧಿಸಿದ್ದಾರೆ.
ಈತ ಕರ್ನಾಟಕದ ಬೀದರ್ ನವನು ಎಂದು ತಿಳಿದು ಬಂದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಸಂತ್ರಸ್ತ ಯುವತಿ ಕೈಯಲ್ಲಿ ಎಳನೀರು ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದಾಗ ಆಕೆಗೆ ಆರೋಪಿಯು ಕಿರುಕುಳ ನೀಡುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.