ಕಾಸರಗೋಡು: ಪಕ್ಷದ ಕಾರ್ಯಕರ್ತನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ನಗರಸಭೆಯ ಬಿಜೆಪಿ ಸದಸ್ಯ ಅಜಿತ್ ಕುಮಾರ್ ( 39) ಕಾಸರಗೋಡು ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಗರಸಭೆಯ 37 ನೇ ವಾರ್ಡ್ ಸದಸ್ಯನಾಗಿದ್ದಾನೆ.
ಮಂಗಳವಾರ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. ಜನವರಿ 31 ರಂದು ರಾತ್ರಿ ಘಟನೆ ನಡೆದಿತ್ತು. ನೆಲ್ಲಿಕುಂಜೆ ಕಸಬಾ ತೀರದಲ್ಲಿ ಗಲ್ಫ್ ಉದ್ಯೋಗಿಯಾಗಿರುವ ಜಿಜು ಸುರೇಶ್ (36) ರನ್ನು ಇರಿದು ಕೊಲೆಗೆ ಯತ್ನಿಸಲಾಗಿತ್ತು. ಮೊಬೈಲ್ ಮೂಲಕ ಕರೆಮಾಡಿ ಕರೆಸಿದ ಅಜಿತ್ ಕುಮಾರ್ ಕೊಲೆಗೆ ಯತ್ನಿಸಿದ್ದನು. ಗಾಯಗೊಂಡ ಜಿಜು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಜಿತ್ ಕುಮಾರ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಮಂಗಳವಾರ ನ್ಯಾಯಾಲಯಕ್ಕೆ ಶರಣಾಗಿದ್ದನು. ಕಾಸರಗೋಡು ನಗರ ಠಾಣಾ ಪೊಲೀಸರು ಅಜಿತ್ ಕುಮಾರ್ ವಿರುದ್ಧ ಕೊಲೆ ಯತ್ನ ಮೊಕದ್ದಮೆ ಹೂಡಿದ್ದರು.
ಅಜಿತ್ ಕುಮಾರ್ ನನ್ನು ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.