ಬೀದರ್: ಕ್ಷುಲ್ಲಕ ವಿಷಯಕ್ಕಾಗಿ ನಡೆದ ಜಗಳವು ವಿಕೋಪಕ್ಕೆ ತಿರುಗಿ ಉದ್ರಿಕ್ತ ಯುವಕರ ಗುಂಪೊಂದು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಜರುಗಿದೆ.
ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಮಹಾಲಕ್ಷ್ಮೀ ದೇವಿ ಪಲ್ಲಕ್ಕಿ ಮೆರವಣಿಗೆ ವೇಳೆ ಬಟಗೇರಾ ಹಾಗೂ ಬಟಗೇರಾ ವಾಡಿ ಗ್ರಾಮದ ಯುವಕರ ಗುಂಪಿನ ಮಧ್ಯೆ ಜಗಳ ನಡೆದಿದೆ.
ಬಳಿಕ ಗ್ರಾಮಸ್ಥರು ಮಧ್ಯಸ್ಥಿಕೆಯಿಂದ ತಣ್ಣಗಾಗಿತ್ತು. ಆದರೆ ಸಂಜೆ ಆಗುತ್ತಿದ್ದಂತೆ ಬಟಗೇರಾ ವಾಡಿ ಗ್ರಾಮದ ಯುವಕರ ಗುಂಪು ಮತ್ತೆ ಬಟಗೇರಾ ಗ್ರಾಮಕ್ಕೆ ಬಂದು ಕ್ಯಾತೆ ತೆಗೆದಿದ್ದಾರೆ. ಪೊಲೀಸ್ ವಾಹನ ಸೇರಿ ಇತರೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಜತೆಗೆ ಕಂಡ ಕಂಡವರ ಮೇಲೆ ಕಲ್ಲು ಎಸೆದಿದ್ದಾರೆ. ಕೈಯಲ್ಲಿ ಚಾಕು, ತಲ್ವಾರ್ ಹಾಗೂ ಬಂದೂಕುಗಳನ್ನು ಹಿಡಿದುಕೊಂಡು ಗಟಗೇರಾ ಗ್ರಾಮಕ್ಕೆ ಆಗಮಿಸಿದ್ದಾರೆ. ಉದ್ರಿಕ್ತ ಯುವಕರು ಪೊಲೀಸ್ ವಾಹನದ ಮೇಲೆ ಕಲ್ಲು ಎತ್ತಿಹಾಕಿ ವಾಹನದ ಗಾಜುಗಳು ಪುಡಿ ಪುಡಿಗೊಳಿಸಿದೆ. ಮಾತ್ರವಲ್ಲ ಕಲ್ಲು ತೂರುತ್ತಿದ್ದಂತೆ ಪೊಲೀಸರು ಓಡಿಹೋಗಿದ್ದಾರೆ.
ಕಲ್ಲು ತೂರಾಟದಿಂದಾಗಿ ಎಎಸ್ಐ ಒಬ್ಬರಿಗೆ ಗಾಯಗಳಾಗಿದ್ದು, ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೇ ವೇಳೆ ಕಿಡಿಗೇಡಿ ಯುವಕರು ತಂದಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಸಹ ಹಾರಿಸಲಾಗಿದೆ ಎನ್ನಲಾಗುತ್ತಿದೆ. ಸುದ್ದಿ ತಿಳಿದ ಜಿಲ್ಲಾ ಎಸ್ಪಿ ಚನ್ನಬಸವಣ್ಣ ಲಂಗೋಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯಕ್ಕೆ ಗ್ರಾಮದಲ್ಲಿ ವಾತಾವರಣ ಶಾಂತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.