ಮಂಗಳೂರು: ಈ ಬಾರಿ ತುಳು ಸಿನಿಮಾ ರಂಗದತ್ತ ಮತ್ತೊಮ್ಮೆ ಪ್ರೇಕ್ಷಕರನ್ನು ಸೆಳೆದು, ದೇಶದ 100ಕ್ಕೂ ಮಿಕ್ಕಿದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸರ್ಕಸ್ ಸಿನಿಮಾದ ರೂವಾರಿ ರೂಪೇಶ್ ಶೆಟ್ಟಿಗೆ ಈಗ ಅದೃಷ್ಟಲಕ್ಷ್ಮೀ ಒಲಿದಂತಿದೆ. ತನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಿರುವ ಇವರು ಈಗ ಭಾರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್ಗಳಲ್ಲಿ ತುಳು ಸಿನಿಮಾಗಳಿಗೂ ಕನ್ನಡಕ್ಕೆ ಸಿಗುವಷ್ಟೇ ಸಂಭಾವನೆಯನ್ನು ಒದಗಿಸಿಕೊಡುವ ಪ್ರಯತ್ನದಲ್ಲಿ ಮೊದಲ ಹಂತದ ಗೆಲುವು ಸಾಧಿಸಿದ್ದಾರೆ.
ಭಾರತ್ ಸಿನಿಮಾಸ್ ಮಲ್ಟಿಪ್ಲೆಕ್ಸ್ಗಳಲ್ಲಿ ತುಳು ಸಿನಿಮಾಗಳಿಗೆ ಮೊದಲ ವಾರದ ಬಳಿಕ ನೀಡುತ್ತಿರುವ ಆದಾಯದ ಪಾಲು ಕನ್ನಡದ ಸಿನಿಮಾಗಳಿಗೆ ನೀಡುವುದಕ್ಕಿಂತ ತುಂಬಾ ಕಡಿಮೆಯಾಗಿತ್ತು. ಇದರಿಂದಾಗಿ ತುಳುಚಿತ್ರ ನಿರ್ಮಾಪಕರಿಗೆ ದೊಡ್ಡ ನಷ್ಟವಾಗುತ್ತಿತ್ತು. ಈಗ ಸರ್ಕಸ್ ಸಿನಿಮಾಕ್ಕೆ ಸಿಗುತ್ತಿರುವ ಜನಮೆಚ್ಚುಗೆಯ ಸಂದರ್ಭದಲ್ಲಿ ಅದರ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಅವರು ಭಾರತ್ ಸಿನಿಮಾಸ್ ನ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ ಜತೆಗೆ ಸತತವಾಗಿ ಮಾತನಾಡಿ, ತಮಗೂ ಕನ್ನಡ ಸಿನಿಮಾಗಳಿಗೆ ನೀಡುವಷ್ಟೇ ಆದಾಯದ ಪಾಲನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಬಾಲಕೃಷ್ಣ ಶೆಟ್ಟಿ ಅವರು ಒಪ್ಪಿದ್ದಾರೆ.
ರೂಪೇಶ್ ಶೆಟ್ಟಿ ಮತ್ತು ಸರ್ಕಸ್ ಚಿತ್ರ ತಂಡದವರ ಮಾತುಕತೆಗೆ ಭಾರತ್ ಸಿನಿಮಾಸ್ ನ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಇದು ರೂಪೇಶ್ ಶೆಟ್ಟಿಯವರ ಸತತ ಪ್ರಯತ್ನಕ್ಕೆ ಒಳ್ಳೆಯ ಫಲ ಲಭಿಸಿದೆ. ಇದು ಇತರ ಚಿತ್ರ ನಿರ್ಮಾಪಕರಲ್ಲಿ ಆಶಾಭಾವ ಮೂಡಿಸಿದೆ. ಇದರಿಂದ ತುಳು ಚಿತ್ರರಂಗಕ್ಕೆ ಅನುಕೂಲ ಆಗಿದೆ. ಈಗ ಉಳಿದ ಮಾಲ್ ಆಡಳಿತದವರೂ ಇದೇ ರೀತಿ ಆದಾಯದ ಪಾಲನ್ನು ಹಂಚಬೇಕು ಎಂಬುದು ಈಗ ತುಳು ಚಿತ್ರರಂಗದ ಕೋರಿಕೆಯಾಗಿದೆ.
ಮಲ್ಟಿಪ್ಲೆಕ್ಸ್ಗಳು ಹಾಗೂ ಸಿಂಗಲ್ ಥಿಯೇಟರ್ಗಳಲ್ಲಿ ಕನ್ನಡ ಸಹಿತ ಇತರ ಭಾಷೆಗಳಿಗೆ ಒಂದು ರೀತಿಯ ಆದಾಯ ಹಂಚಿಕೆ ಮಾಡಲಾಗುತ್ತಿದ್ದು, ತುಳುವಿಗೆ ಬೇರೆಯೇ ಮಾನದಂಡ ಇದೆ. ಮೊದಲ ವಾರದಲ್ಲಿ ಆದಾಯದ ಪಾಲನ್ನು 50:50ರ ಪ್ರಕಾರ ಹಂಚಲಾಗುತ್ತದೆ. ಆದರೆ ಆ ಬಳಿಕ ಪ್ರತಿ ವಾರವೂ ನಿರ್ಮಾಪಕರಿಗೆ ನೀಡುವ ಪಾಲು ಕಡಿಮೆಯಾಗುತ್ತಾ ಹೋಗುತ್ತದೆ. ಅದರಲ್ಲೂ ತುಳುವಿನ ನಿರ್ಮಾಪಕರಿಗೆ ತುಂಬಾ ಕಡಿಮೆ ನೀಡಲಾಗುತ್ತಿದೆ.
ಈ ತಾರತಮ್ಯವನ್ನು ಸರಿಪಡಿಸಿ ನಮಗೂ ಕನ್ನಡಕ್ಕೆ ಕೊಡುವಷ್ಟೇ ಪಾಲನ್ನು ನೀಡಬೇಕು ಎಂದು ತುಳು ಚಿತ್ರರಂಗದವರು ದೀರ್ಘ ಕಾಲದಿಂದ ಆಗ್ರಹಿಸುತ್ತಲೇ ಬಂದಿದ್ದಾರೆ. ಈಗ ರೂಪೇಶ್ ಶೆಟ್ಟಿ ಅವರು ಈ ವಿಷಯದಲ್ಲಿ ಭಾರತ್ ಸಿನಿಮಾಸ್ ನಲ್ಲಿ ಒಂದು ಹಂತದ ಸಕ್ಸಸ್ ಸಾಧಿಸಿದ್ದಾರೆ. ಮುಂದೆ ಎಲ್ಲಾ ಮಲ್ಟಿಪ್ಲೆಕ್ಸ್ಗಳಲ್ಲೂ ಈ ಪ್ರಯತ್ನಕ್ಕೆ ಜಯ ಸಿಗಲಿ ಎಂಬುದು ಕೋಸ್ಟಲ್ವುಡ್ನವರ ಹಾರೈಕೆಯಾಗಿದೆ.