ಭೀಮಾವರಂ: ‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಕೇಂದ್ರ ಸರ್ಕಾರ ಕ್ರಾಂತಿ ವೀರ ಅಲ್ಲೂರಿ ಸೀತಾರಾಮರಾಜರ 125ನೇ ಜಯಂತಿ ಆಚರಿಸಲು ಸಿದ್ಧತೆ ನಡೆಸಿದೆ. ಇದರ ಅಂಗವಾಗಿ ಭೀಮಾವರಂನಲ್ಲಿ ಜುಲೈ4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡುವಂತೆ ನಟ ಚಿರಂಜೀವಿ ಅವರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಈ ಸಂಬಂಧ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಚಿರಂಜೀವಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ”ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭೀಮಾವರಂನಲ್ಲಿ ಅಲ್ಲೂರಿ ಸೀತಾರಾಮರಾಜರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ಅನಾವರಣಗೊಳಿಸಲಿದ್ದೇವೆ. ಈ ಕಾರ್ಯಕ್ರಮದಲ್ಲಿ ನೀವು ಭಾಗವಹಿಸಬೇಕು. ಕೇಂದ್ರ ಸಂಸ್ಕೃತಿ ಸಚಿವಾಲಯವು ಆಂಧ್ರಪ್ರದೇಶ ಸರ್ಕಾರದ ಸಹಯೋಗದೊಂದಿಗೆ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇವೆಲ್ಲವುಗಳಲ್ಲಿ ನಿಮ್ಮ ಸಹಕಾರವನ್ನು ನಾವು ಬಯಸುತ್ತೇವೆ, ಎಂದು ಕಿಶನ್ ರೆಡ್ಡಿ ಚಿರಂಜೀವಿ ಅವರನ್ನು ಆಹ್ವಾನಿಸಿದರು.
ಮನವಿ ಮೇರೆಗೆ ಜುಲೈ 4 ರಂದು ಭೀಮಾವರಂನಲ್ಲಿ ನಡೆಯಲಿರುವ ಅಲ್ಲೂರಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಚಿರಂಜೀವಿ ವೇದಿಕೆ ಹಂಚಿಕೊಳ್ಳಲಿದ್ದಾರೆ.