ಹೈದರಾಬಾದ್: ಶುಕ್ರವಾರ ರಾತ್ರಿ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಹೈದರಾಬಾದ್ ಜುಬಿಲಿ ಹಿಲ್ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು ನಟ ಸಾಯಿ ಧರ್ಮ್ ತೇಜ್ ಅಪಘಾತಕ್ಕೆ ಅತಿ ವೇಗವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧಾಪುರ್ ಕೇಬಲ್ ಸೇತುವೆ ಮೇಲೆ ತೇಜ್ ಚಲಾಯಿಸುತ್ತಿದ್ದ ಕ್ರೀಡಾ ಬೈಕ್ ಉರುಳಿ ಬಿದ್ದು, ಅವರಿಗೆ ಕೈಕಾಲು, ಪಕ್ಕೆಲುಬು ಸೇರಿದಂತೆ ದೇಹದ ನಾನಾ ಕಡೆ ಗಂಭೀರ ಗಾಯಗಳಾಗಿದ್ದವು. ಅವರು ಮಾಧಾಪುರ್ ಕೇಬಲ್ ಸೇತುವೆ ಮೇಲೆ ಬೈಕ್ನ್ನು ಗಂಟೆಗೆ 80 ಕಿಮೀ ವೇಗದಲ್ಲಿ ಚಲಾಯಿಸುತ್ತಿದ್ದದ್ದೇ ಅಪಘಾತವಾಗಲು ಕಾರಣ. ಈ ಸೇತುವೆ ಮೇಲೆ ಅಧಿಕ ವೇಗ ನಿಷೇಧಿಸಲಾಗಿದೆ. ಗಂಟೆಗೆ 40 ಕಿಮೀ ವೇಗದಲ್ಲಿ ವಾಹನ ಚಲಾಯಿಸಲು ಮಾತ್ರ ಅವಕಾಶ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೊಂದು ದುರದೃಷ್ಟಕರ ಘಟನೆ, ನಿಗದಿತ ವೇಗಕ್ಕಿಂತ ತೇಜ್ ಅವರು ಅಧಿಕ ವೇಗದಲ್ಲಿ ಬೈಕ್ ಚಲಾಯಿಸಿದ್ದರು. ಅಲ್ಲದೇ ಹೆಲ್ಮೆಟ್ ಕೂಡ ಸರಿಯಾಗಿ ಹಾಕಿರಲಿಲ್ಲ ಎಂದು ಸೈಬರಾಬಾದ್ ಪೊಲೀಸರು ತಿಳಿಸಿದ್ದಾರೆ.
ನಿರ್ಲಕ್ಷ್ಯತನದಿಂದ ವಾಹನ ಸವಾರಿ ಮಾಡಿದ್ದಕ್ಕೆ ಸಾಯಿ ಧರ್ಮ ತೇಜ್ ಅವರ ಮೇಲೆ ಐಪಿಸಿ ಕಲಂ 336 ಮತ್ತು 279 ಅಡಿ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರಾಯದುರ್ಗಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.