ಹೈದರಾಬಾದ್: ಮಾಜಿ ಮಾವೋವಾದಿ, ಕ್ರಾಂತಿಕಾರಿ ಗಾಯಕ ಗದ್ದರ್ ವಿಧಿವಶರಾಗಿದ್ದಾರೆ. ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಜಾನಪದ ಗಾಯಕ ನಿಧನರಾಗಿದ್ದಾರೆ. ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಗದ್ದರ್ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗದ್ದರ್ ಅವರ ನಿಧನಕ್ಕೆ ಹಲವು ಕ್ರಾಂತಿಕಾರಕ ಸಾಹಿತಿಗಳು, ರಾಜಕೀಯ ಮುಖಂಡರು ಹಾಗೂ ನಾಗರಿಕರು ಸಂತಾಪ ಸೂಚಿಸಿದ್ದಾರೆ.
1949ರಲ್ಲಿ ಜನಿಸಿದ ಗದ್ದರ್ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ಬಾಲ್ಯದಿಂದಲೇ ಹೋರಾಟ ಸ್ವಭಾವ ಮೈಗೂಡಿಸಿಕೊಂಡ ಗುಮ್ಮಡಿ ವಿಠಲ್ ರಾವ್ ಗದ್ದರ್ ಆಗಿ ಬದಲಾದರು. ಗದ್ದರ್ 2010ರವರೆಗೆ ನಕ್ಸಲ್ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು. ನಂತರ ಅವರು ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರತ್ಯೇಕ ತೆಲಂಗಾಣ ರಾಜ್ಯದ ಆಂದೋಲನದಲ್ಲಿ ಗದ್ದರ್ ಭಾಗಿಯಾಗಿದ್ದರು.