ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.
ಅನೇಕ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸಿನಿಮಾ ನಟ-ನಟಿಯರನ್ನು ಆಹ್ವಾನಿಸಿದ ಫೋಟೋ ವೈರಲ್ ಆಗಿದೆ. ಈ ನಡುವೆ ಭಾರತೀಯ ಚಿತ್ರರಂಗದ ಕೆಲವು ಪ್ರಮುಖ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಲ್ಮಾನ್ ಖಾನ್, ಆಮಿರ್ ಖಾನ್, ಶಾರುಖ್ ಖಾನ್ ಮುಂತಾದ ನಟರನ್ನು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಸುದ್ದಿಯಾಗಿದೆ.
ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ಗೆ ಆಹ್ವಾನ ನೀಡಿಲ್ಲ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಕರಣ್ ಜೋಹರ್, ಶಿಲ್ಪಾ ಶೆಟ್ಟಿ, ಸಂಜಯ್ ದತ್ ಮುಂತಾದ ಕಲಾವಿದರಿಗೂ ಆಹ್ವಾನ ತಲುಪಿಲ್ಲ. ಅಂತಿಮವಾಗಿ ಯಾವೆಲ್ಲ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ರಜನಿಕಾಂತ್, ಆಯುಷ್ಮಾನ್ ಖುರಾನಾ, ಕಂಗನಾ ರಣಾವತ್, ಆಲಿಯಾ ಭಟ್, ರಣಬೀರ್ ಕಪೂರ್, ರಣದೀಪ್ ಹೂಡಾ, ಅನುಷ್ಕಾ ಶರ್ಮಾ, ರಜನಿಕಾಂತ್, ಅನುಪಮ್ ಖೇರ್, ಮಾಧುರಿ ದೀಕ್ಷಿತ್, ರಿಷಬ್ ಶೆಟ್ಟಿ, ಯಶ್, ಅಜಯ್ ದೇವಗನ್, ಪ್ರಭಾಸ್, ರಾಮ್ ಚರಣ್, ಸನ್ನಿ ಡಿಯೋಲ್, ಮೋಹನ್ಲಾಲ್, ಸಂಜಯ್ ಲೀಲಾ ಬನ್ಸಾಲಿ, ಚಿರಂಜೀವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ತಲುಪಿದೆ.