ದಾವಣಗೆರೆ: ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ನೈತಿಕ ಪೊಲೀಸ್ ಗಿರಿ ಮೆರೆದಿದ್ದು, ದರ್ಶನ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿದ್ದ ಎಂದು ಆರೋಪಿಸಿ ಯುವಕನೊಬ್ಬನಿಗೆ ಶಿಕ್ಷೆ ನೀಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದೊಡ್ಡೇಶ್ ನೈತಿಕ ಪೊಲೀಸ್ ಗಿರಿ ಮೆರೆದ ವ್ಯಕ್ತಿ.
ಲಿಂಗರಾಜು ಹೆಸರಿನ ಯುವಕ ಕೆಲವು ದಿನಗಳ ಹಿಂದೆ ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ಯುವಕ ಪುನೀತ್ ರಾಜ್ಕುಮಾರ್ ಅಭಿಮಾನಿ ಎಂದು ಸಹ ಹೇಳಲಾಗುತ್ತಿದೆ. ಈ ಯುವಕನ್ನು ಹಿಡಿದು ತಂದು ‘ಕಾಟೇರ’ ಸಿನಿಮಾ ಪ್ರದರ್ಶನವಾಗುತ್ತಿರುವ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದ ಮುಂದೆ ನಿಲ್ಲಿಸಿ ಆತನಿಗೆ ಶಿಕ್ಷೆ ನೀಡಿದ್ದಾನೆ ದೊಡ್ಡೆಶ್.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ದೊಡ್ಡೇಶ್ ಹಂಚಿಕೊಂಡಿದ್ದಾನೆ. ಭಯಗೊಂಡಿದ್ದ ಯುವಕ ದೊಡ್ಡೇಶ್ ಹೇಳಿದಂತೆ ಬರಿಗೈಯಲ್ಲಿ ಕರ್ಪೂರ ಹಚ್ಚಿಕೊಂಡು ಆರತಿ ಮಾಡಿದ್ದಾನೆ.
ಯುವಕನ ಮೇಲೆ ನೈತಿಕ ಪೊಲೀಸ್ಗಿರಿ ನಡೆಸಿರುವ ದೊಡ್ಡೇಶ್ ಈ ಹಿಂದೆ ದುನಿಯಾ ವಿಜಯ್ ಅಭಿಮಾನಿ ಸಂಘದಲ್ಲಿದ್ದ ಎನ್ನಲಾಗುತ್ತಿದೆ. ಇದೀಗ ತಾನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಈಗ ಈ ಕೃತ್ಯ ಎಸಗಿದ್ದಾನೆ. ದೊಡ್ಡೇಶ್ ಮೇಲೆ ಈ ಹಿಂದೆಯೂ ನೈತಿಕ ಪೊಲೀಸ್ಗಿರಿ ಎಸಗಿದ ಆರೋಪವಿದೆ. ಚಿತ್ರಮಂದಿರವೊಂದರಲ್ಲಿ ಒಮ್ಮೆ ಯುವಕ ಹಾಗೂ ಯುವತಿಯ ಮೇಲೆ ಹಲ್ಲೆ ಎಸಗಿದ್ದನಂತೆ ದೊಡ್ಡೇಶ್.