ಮುಂಬೈ: ನಟ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯ್ ಗ್ಯಾಂಗ್ನಿಂದ ಹೊಸ ಬೆದರಿಕೆ ಬಂದಿದೆ. ಅವರನ್ನು ಕೊಲ್ಲುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಪೋಸ್ಟ್ ಹಾಕಲಾಗಿದೆ. ಈ ಬೆದರಿಕೆ ಬಳಿಕ ಮುಂಬೈ ಪೊಲೀಸರು ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಮತ್ತೊಮ್ಮೆ ಪರಿಶೀಲಿಸಿದ್ದಾರೆ.
ಸಲ್ಮಾನ್ಗೆ ಈಗಾಗಲೇ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಲಾರೆನ್ಸ್ ಬಿಷ್ಣೋಯ್ ಕೊಲೆ ಬೆದರಿಕೆ ಹಾಕಿದ ಬಳಿಕ ಸಲ್ಲುಗೆ ಭದ್ರತೆ ಹೆಚ್ಚಿಸಲಾಯಿತು.
ಪಂಜಾಬಿ ಗಾಯಕ ಮತ್ತು ನಟ ಗಿಪ್ಪಿ ಗ್ರೆವಾಲ್ ಅವರ ಕೆನಡಾದ ಮನೆ ಎದುರು ಶೂಟೌಟ್ ನಡೆದಿತ್ತು. ಇದನ್ನು ಮಾಡಿದ್ದು ನಾವೇ ಎಂದು ಲಾರೆನ್ಸ್ ಹೇಳಿಕೊಂಡಿದ್ದಾನೆ. ‘ನೀವು (ಗಿಪ್ಪಿ) ಸಲ್ಮಾನ್ ಖಾನ್ ಅವರನ್ನು ನಿಮ್ಮ ಸಹೋದರ ಎಂದು ಪರಿಗಣಿಸಿದ್ದೀರಿ. ನಿಮ್ಮ ಸಹೋದರ ಮುಂದೆ ಬಂದು ನಿಮ್ಮನ್ನು ಉಳಿಸುವ ಸಮಯ. ಸಲ್ಮಾನ್ ಖಾನ್ಗೂ ಈ ಸಂದೇಶ ನೀಡಲಾಗುತ್ತಿದೆ. ದಾವೂದ್ ನಿಮ್ಮನ್ನು ಕಾಪಾಡುತ್ತಾನೆ ಎಂಬ ಭ್ರಮೆ ಬೇಡ. ಯಾರೂ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ’ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಖಾತೆ ಲಾರೆನ್ಸ್ ಬಿಷ್ಣೋಯ್ ಹೆಸರಲ್ಲಿ ಇದೆ.
‘ಸಿದ್ದು ಮುಸೇವಾಲಾ ಸಾವಿನ ನಂತರ ನಿಮ್ಮ ನಾಟಕೀಯ ಪ್ರತಿಕ್ರಿಯೆಯನ್ನು ನಾವು ನಿರ್ಲಕ್ಷಿಸಿಲ್ಲ. ಅವನು ಯಾವ ರೀತಿಯ ವ್ಯಕ್ತಿಯಾಗಿದ್ದ, ಅವನ ಕ್ರಿಮಿನಲ್ ರೆಕಾರ್ಡ್ ಏನು ಎಂಬುದು ನಮಗೆಲ್ಲರಿಗೂ ತಿಳಿದಿದೆ. ನೀವು ಈಗ ನಮ್ಮ ರೇಡಾರ್ನಲ್ಲಿ ಇದ್ದೀರಿ. ಇದನ್ನು ಟ್ರೇಲರ್ ಎಂದು ಪರಿಗಣಿಸಿ.
ಸಂಪೂರ್ಣ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಯಾವುದೇ ದೇಶಕ್ಕೆ ಓಡಿಹೋಗು ಆದರೆ ಸಾವಿಗೆ ವೀಸಾ ಅಗತ್ಯವಿಲ್ಲ ಎಂಬುದನ್ನು ನೆನಪಿಡಿ. ಸಾವು ಆಹ್ವಾನವಿಲ್ಲದೆ ಬರಬಹುದು’ ಎಂದು ಬೆದರಿಕೆ ಹಾಕಲಾಗಿದೆ.
ಈ ಮಹತ್ತರವಾದ ಬೆಳವಣಿಗೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.