ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಸಲ್ಮಾನ್ ಖಾನ್ ಅವರ ಈ ಹಿಂದಿನ ಹಲವು ಚಿತ್ರಗಳಂತೆ ಹಳೆಯ ಕಥೆಯ ನಿರೂಪಣೆ ಮತ್ತೆ ಪುನಾರವರ್ತನೆಯಾಗಿದೆ. ಚಿತ್ರದ ನಾಯಕಿ ಪೂಜೆ ಹೆಗ್ಡೆ ಅವರು ಪ್ರಮುಖ ಭೂಮಿಕೆಯಲಿದ್ದು, ಮೊದಲರ್ಧ ಭಾಗದಲ್ಲಿ ನಟನೆ, ಸೌಂದರ್ಯಗಳಿಂದ ಚಿತ್ರರಸಿಕರ ಮನಸೆಳೆಯುವ ಅವರು ಎರಡನೇ ಭಾಗದಲ್ಲಿ ಬೋರ್ ಹೊಡೆಸುತ್ತಾರೆ.
ಸಲ್ಮಾನ್ ಖಾನ್ ಅಭಿನಯದ ಈ ಹಿಂದಿನ ಚಿತ್ರಗಳಂತೆಯೇ ಚಿತ್ರದ ಆರಂಭದ ಹೂರಣವಿದೆ. ತರ್ಕರಹಿತ ಸಂಭಾಷಣೆ ಸಿನಿರಸಿಕರ ಮನಗೆಲ್ಲುವಲ್ಲಿ ವಿಫಲತೆ ಕಂಡಿದೆ. ಆದರೆ ಸಲ್ಮಾನ್ ಖಾನ್ ಅವರಿಗೆ ಅವರದ್ದೇ ಆದ ಫ್ಯಾನ್ ಕ್ಲಬ್ ಇದ್ದು, ಅವರ ಅಭಿಮಾನಿಗಳು ಖಾನ್ ಡೈಲಾಗ್, ಮ್ಯಾನರಿಸಂಗೆ ಮನಸೋಲಬಹುದು ಹೊರತು ಬೇರೇನೂ ಇಲ್ಲ. ವಿಚಿತ್ರವೆಂದರೇ ಈ ಬಾರಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರವೂ ಸಲ್ಮಾನ್ ಖಾನ್ ಅವರ ಕಟ್ಟಾ ಅಭಿಯಾನಿಯ ಸಹನೆಯನ್ನೂ ಪರೀಕ್ಷಿಸುವ ಚಿತ್ರವಾಗಿದೆ ಎಂದರೆ ತಪ್ಪಾಗಲಾರದು. ತಮಾಷೆಯೂ ಇಲ್ಲ, ಗಂಭೀರವೂ ಅಲ್ಲ ಎಂಬಂತಿದೆ.
ಚಿತ್ರದಲ್ಲಿ ಸಲ್ಮಾನ್ ಅವರ ಮೂವರು ಕಿರಿಯ ಸಹೋದರರ ಏಕೈಕ ಗುರಿ ಖಾನ್ ಅವರಿಗೆ ಸೂಕ್ತ ವಧುವನ್ನು ಹುಡುಕುವ ಅಂಶವಿದೆ. ದ್ವಿತೀಯಾರ್ಧದಲ್ಲಿ, ಚಿತ್ರವು ದಕ್ಷಿಣ ಭಾರತಕ್ಕೆ ಸ್ಥಳಾಂತರಗೊಳ್ಳುತ್ತದೆ. ಆದರೆ ಅದಕ್ಕೊಂದು ತಾರ್ಕಿಕ ಅಂತ್ಯವೇ ದೊರೆಯುವುದಿಲ್ಲ. ಚಿತ್ರ ಒಂದು ಹಂತದಲ್ಲಿ ಏಕತಾನತೆ, ನೀರಸವಾಗಿ ಭಾಸವಾಗುತ್ತದೆ.
ಈ ಚಿತ್ರವು ೨೦೧೪ ರ ತಮಿಳು ಚಿತ್ರ ‘ವೀರಂ’ ನ ರಿಮೇಕ್ ಆಗಿದ್ದರೂ ಫರ್ಹಾದ್ ಸಂಜಿ ಅವರ ನಿರ್ದೇಶನ ಕಳಪೆಯಾಗಿದೆ. ಆದರೆ ಛಾಯಾಗ್ರಹಣ ಉತ್ತಮವಾಗಿದೆ, ವಿಶೇಷವಾಗಿ ಮೆಟ್ರೋ ರೈಲು ಮತ್ತು ಕ್ಲೈಮ್ಯಾಕ್ಸ್ ಫೈಟ್ ದೃಶ್ಯಗಳು ಮನಸೆಳೆಯುತ್ತವೆ.