ಬೆಂಗಳೂರು: ಬಿಗ್ ಬಾಸ್ ಆರಂಭವಾಗಿನಿಂದ ಸ್ಪರ್ಧಿಗಳಿಗೆ ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಿದೆ. ಮೊದಲಿಗೆ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿ ಅರೆಸ್ಟ್ ಆಗಿದ್ದರು. ಬಳಿಕ ತನಿಶಾ ಮೇಲೂ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಇದೀಗ ಡ್ರೋನ್ ಪ್ರತಾಪ್ಗೂ ಸಂಕಷ್ಟ ಎದುರಾಗಿದೆ. ನೋಡಲ್ ಅಧಿಕಾರಿ ಡಾ. ಪ್ರಯಾಗ್ ಅವರು ಪ್ರತಾಪ್ ಮೇಲೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಎದುರು ಪ್ರತಾಪ್ ಬಿಬಿಎಂಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕ್ವಾರಂಟೈನ್ ಸಮಯದಲ್ಲಿ ನೋಡಲ್ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡ್ರು ಎಂದು ಹೇಳಿದ್ದರು.
ಈ ಆಧಾರದ ಮೇಲೆ ನೋಡಲ್ ಅಧಿಕಾರಿ ಡಾ. ಪ್ರಯಾಗ್ ಅವರು ಡ್ರೋನ್ ಪ್ರತಾಪ್ ಮೇಲೆ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಮಾನನಷ್ಟ ಮೊಕದ್ದಮೆ ದಾಖಲಿಸಲು ತಯಾರಿ ನಡೆಸಿದ್ದಾರೆ. ಇದೇ ವಿಚಾರವಾಗಿ ಪ್ರತಾಪ್ ವಿರುದ್ದ ಕಾನೂನು ಕ್ರಮಕ್ಕೆ ವಕೀಲರನ್ನ ನೇಮಕ ಮಾಡಿದ್ದಾರೆ.
ಪ್ರತಾಪ್ ಆರೋಪಕ್ಕೆ ಬಿಗ್ ಬಾಸ್ ವೇದಿಕೆಯಲ್ಲೇ ಕ್ಷಮ ಕೇಳುವಂತೆ ಡಾ. ಪ್ರಯಾಗ್ ಆಗ್ರಹಿಸಿದ್ದಾರೆ. ಬಿಗ್ ಬಾಸ್ ಆಯೋಜಕರಿಗೂ ವೇದಿಕೆಯಲ್ಲಿ ಸುಳ್ಳು ಆರೋಪಕ್ಕೆ ಕ್ಷಮೆ ಕೇಳಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲಿಯವರೆಗೆ ಬಿಗ್ ಬಾಸ್ ಆಯೋಜಕರಿಂದ ಪ್ರತಾಪ್ ವಿರುದ್ಧ ಶಿಸ್ತುಕ್ರಮದ ಬಗ್ಗೆ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆ ಡಾ. ಪ್ರಯಾಗ್ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ.