ಇದು ಬರಿ ಯುವಜನತೆಯ “ದಿಲ್ ಖುಷ್” ಅಲ್ಲ. ಎಲ್ಲರಿಗೂ ಹಿಡಿಸುವ “ದಿಲ್ ಖುಷ್”. ಸಂಪೂರ್ಣ ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂದು ಚಿತ್ರ ತಂಡ ಹೇಳುತ್ತಿದೆ. ಸದ್ಯ ವಿಭಿನ್ನ ಕಥಾಹಂದರ ಹೊಂದಿರುವ “ದಿಲ್ ಖುಷ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕೊಡಗಿನ ಸೋಮವಾರಪೇಟೆ, ಶನಿವಾರಸಂತೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಡಬ್ಬಿಂಗ್ ಕೂಡ ಪೂರ್ಣವಾಗಿದ್ದು, ರೀರೆಕಾರ್ಡಿಂಗ್ ನಡೆಯುತ್ತಿದೆ.
ನಿರ್ದೇಶಕ ಪ್ರಮೋದ್ ಜಯ ಹೇಳುವಂತೆ ಈ ಚಿತ್ರದಲ್ಲಿ ನಾಯಕ, ನಾಯಕಿ ಪಾತ್ರ ಅಷ್ಟೆ ಅಲ್ಲದೆ ಎಲ್ಲ ಪಾತ್ರಕ್ಕೂ ಪ್ರಾಮುಖ್ಯತೆ ಇದೆ, ನಮ್ಮ ಸುತ್ತ ಮುತ್ತ ನಡೆಯುವ ಕಥೆ ಎಂದೆನಿಸುತ್ತದೆ. ಕಾಮಿಡಿ ಹಾಗು ಎಮೋಷನಲ್ ಸನ್ನಿವೇಶಗಳಲ್ಲಿ ರಂಗಾಯಣ ರಘು, ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು ಅವರ ಪಾತ್ರಗಳು ಕಾಡುತ್ತವೆ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ ಈ ಚಿತ್ರದ ಪ್ರಥಮ ಪ್ರತಿ ಸದ್ಯದಲ್ಲೇ ಸಿದ್ದವಾಗಲಿದೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿರುವ ಐದು ಹಾಡುಗಳು ಚಿತ್ರದಲ್ಲಿದ್ದು, ಫೆಬ್ರವರಿ ನಂತರ ಒಂದಾದ ಮೇಲೆ ಒಂದು ಹಾಡು ಬಿಡುಗಡೆಯಾಗಲಿದೆ. ಆನಂತರ ಟ್ರೇಲರ್ ಕೂಡ ಬರಲಿದೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಂಜಿತ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪಾದಾರ್ಪಣೆ ಮಾಡುತ್ತಿದ್ದು, ನಾಯಕಿಯಾಗಿ ಸ್ಪಂದನ ಸೋಮಣ್ಣ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಧರ್ಮಣ್ಣ ಕಡೂರು, ರವಿ ಭಟ್, ಅರುಣ ಬಾಲರಾಜ್, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂದನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿವಾಸ್ ನಾರಾಯಣ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜ್ಞಾನೇಶ್ ಬಿ ಮಠದ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಬಹುಬೇಗ ತೆರೆಗೆ ಬರಲಿದೆ.