ಬೆಂಗಳೂರು: ಚಂದನವನದಲ್ಲಿ ಈ ವರ್ಷದ ಅತ್ಯಂತ ದೊಡ್ಡ ಚಿತ್ರವಾಗಿರುವ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ನಟನೆಯ ಕಾಟೇರ ಚಿತ್ರವು ಇಂದಿನಿಂದ ಒಟಿಟಿಯಲ್ಲಿ ಪ್ರತ್ಯಕ್ಷವಾಗುತ್ತಿದ್ದರೆ, ಡೆವಿಲ್ ಚಿತ್ರವನ್ನು ಕೈಗೆತ್ತಿಕೊಳ್ಳುವ ಮುನ್ನ ದೊಡ್ಡತಿರುಪತಿಗೆ ಭೇಟಿ ನೀಡಿರುವ ಡಿಬಾಸ್ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಭೂ ಮಾಲೀಕರ ದರ್ಪ, ದೌರ್ಜನ್ಯಗಳ ನಡುವೆ ಬದುಕುವ ರೈತಾಪಿ ಕುಟುಂಬದ ಜೀವನವನ್ನು ಆಧಾರಿಸಿದ್ದ ಕಾಟೇರ ಚಿತ್ರವು ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಈಗಲೂ ಯಶಸ್ವಿ ಪ್ರದರ್ಶನ ನಡೆಯುತ್ತಿದ್ದು , 50 ದಿನಗಳ ಸಂಭ್ರಮದತ್ತ ಹೆಜ್ಜೆ ಹಾಕಿದೆ.
ತಿರುಪತಿ ತಿಮ್ಮಪ್ಪನ ಪರಮಭಕ್ತರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸಿನಿಮಾ ಸೆಟ್ಟೇರುವ ಹಾಗೂ ಬಿಡುಗಡೆಯ ಬೆನ್ನಲ್ಲೇ ಆಪ್ತ ಸ್ನೇಹಿತರೊಂದಿಗೆ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆಯುವ ಪ್ರತೀತಿಯನ್ನು ಅಳವಡಿಸಿಕೊಂಡು ಬಂದಿದ್ದಾರೆ. ಈ ಹಿಂದೆ ರಾಬರ್ಟ್, ಕ್ರಾಂತಿ, ಕಾಟೇರ ಸಿನಿಮಾಗಳ ಸಮಯದಲ್ಲಿ ಡಿ ಬಾಸ್ ಭೂಲೋಕದ ವೈಕುಂಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ಫೆಬ್ರವರಿ 16 ರಂದು ಡಿಬಾಸ್ ದರ್ಶನ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅಂದೇ ಡೆವಿಲ್ ಚಿತ್ರದ ಫಸ್ಟ್ಲುಕ್ ಬಿಡುಗಡೆ ಆಗುವ ಸಂಭವವಿದೆ.