ನಂಜನಗೂಡು: ಕರಾಟೆ ಕಲಿಯ ಹೊಡೆತಕ್ಕೆ ಚಿಕ್ಕಪ್ಪ ಕೊನೆಯುಸಿರೆಳೆದ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಕಾರ್ಯ ಗ್ರಾಮದಲ್ಲಿ ನಡೆದಿದೆ. ಜಮೀನು ವಿಚಾರದಲ್ಲಿ ದಾಯಾದಿಗಳ ನಡುವೆ ನಡೆದ ಗಲಾಟೆ ಓರ್ವರ ಕೊಲೆಯಲ್ಲಿ ಅಂತ್ಯವಾಗಿದೆ.
ಅಣ್ಣ ತಮ್ಮಮಂದಿರ ಗಲಾಟೆಯಲ್ಲಿ ಕೊಲೆಯಾದವರು ಕರಿಶೆಟ್ಟಿ. ಈ ಸಂಬಂಧ ಅಣ್ಣ ಶಿವಣ್ಣ ಶೆಟ್ಟಿ ಸೇರಿದಂತೆ ನಾಲ್ವರ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕಾರ್ಯ ಗ್ರಾಮದ ಸರ್ವೆ ನಂ.91 ಮತ್ತು 92 ರ ಜಮೀನಿನ ವಿಚಾರದಲ್ಲಿ ಕರಿಶೆಟ್ಟಿ ಹಾಗೂ ಶಿವಣ್ಣಶೆಟ್ಟಿ ನಡುವೆ ಎ.ಸಿ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ದ್ವೇಷ ಬೆಳೆದಿದೆ.
ನಿನ್ನೆ ರಾತ್ರಿ ಇದೇ ವಿಚಾರದಲ್ಲಿ ಶಿವಣ್ಣಶೆಟ್ಟಿ ಹಾಗೂ ಮಗನಾದ ಸಿದ್ದಪ್ಪಾಜಿ ತೋಟದ ಮನೆಗೆ ಬಂದು ಕಿರಿಕ್ ತೆಗೆದಿದ್ದಾರೆ. ಸಿದ್ದಪ್ಪಾಜಿ ಕರಾಟೆ ಪಟುವಾಗಿದ್ದು ಕರಿಶೆಟ್ಟಿ ಎದೆಗೆ ಗುದ್ದಿದ್ದಾನೆ. ಇದಕ್ಕೆ ತಂದೆ ಶಿವಣ್ಣಶೆಟ್ಟಿ ಸಹ ಸಾಥ್ ನೀಡಿದ್ದಾರೆ.
ತಂದೆಯ ರಕ್ಷಣೆಗೆ ಬಂದ ಮಗ ಕುಮಾರಶೆಟ್ಟಿ ಮೇಲೂ ಹಲ್ಲೆ ನಡೆಸಿದ್ದಾರೆ. ತಂದೆ ಮಗ ನಡೆಸಿದ ಹಲ್ಲೆಗೆ ಕರಿಶೆಟ್ಟಿ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾರೆ. ಈ ಸಂಬಂಧ ಶಿವಣ್ಣ ಶೆಟ್ಟಿ, ಸಿದ್ದಪ್ಪಾಜಿ, ಮಲ್ಲಿಗಮ್ಮ ಹಾಗೂ ನೀಲಮ್ಮ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.