ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಜನ್ಮದಿನದ ವೇಳೆ ಅವರು ಅಭಿಮಾನಿಗಳಿಗೆ ಉಡುಗೊರೆ ಒಂದು ನೀಡಿದ್ದಾರೆ. ಪಾನ್ ಮಸಾಲಾ ಬ್ರ್ಯಾಂಡ್ನ ಜಾಹೀರಾತುಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿರುವ ಬಚ್ಚನ್, ತನ್ಮೂಲಕ ತಂಬಾಕು ವಿರೋಧಿ ಸಂಘಟನೆಗಳ ಮನವಿಗೆ ಮಾನ್ಯತೆ ನೀಡಿದ್ದಾರೆ.
ಇತ್ತೀಚೆಗೆ ಕಮಲಾ ಪಸಂದ್ ಪಾನ್ ಮಸಾಲಾದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಿಗ್ ಬಿಗೆ ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆಯೊಂದು ಆ ಜಾಹೀರಾತಿನಿಂದ ಹೊರಬರುವಂತೆ ಆಗ್ರಹಿಸಿ ಪತ್ರ ಬರೆದಿತ್ತು.
ಪಾನ್ ಮಸಾಲಾದಿಂದ ಜನರ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಸರ್ಕಾರದ ಪಲ್ಸ್ ಪೋಲಿಯೋ ಅಭಿಯಾನದ ರಾಯಭಾರಿಯಾದ ಬಚ್ಚನ್ ಈ ತೆರನ ಜಾಹೀರಾತು ಮಾಡಬಾರದು ಎಂದಿತ್ತು. ಬಚ್ಚನ್ರ ಹಲವು ಅಭಿಮಾನಿಗಳೂ ಸಾಮಾಜಿಕ ಮಾಧ್ಯಮದಲ್ಲಿ ಪಾನ್ ಮಸಾಲಾ ಜಾಹೀರಾತಿನಲ್ಲಿ ಭಾಗವಹಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು .
ಈ ಹಿನ್ನೆಲೆಯಲ್ಲಿ ಕಳೆದ ವಾರ ಬಚ್ಚನ್, ಪಾನ್ ಮಸಾಲಾ ಕಂಪೆನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಅಂತ್ಯಗೊಳಿಸಿದ್ದು, ಅವರು ಜಾಹೀರಾತಿಗಾಗಿ ನೀಡಿದ ಹಣವನ್ನು ಹಿಂತಿರುಗಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪಾನ್ ಮಸಾಲಾ ಜಾಹೀರಾತು ‘ಸರ್ರೊಗೇಟ್ ಅಡ್ವರ್ಟೈಸಿಂಗ್’ ಅಂದರೆ ನಿಷೇಧಿತ ವಸ್ತುಗಳ ಪ್ರಚಾರ ಮಾಡಿದಂತೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದು ಬಚ್ಚನ್ ಹೇಳಿದ್ದಾರೆ.
ನ್ಯಾಷನಲ್ ಆರ್ಗನೈಸೇಷನ್ ಫಾರ್ ಟೊಬಾಕೊ ಎರಾಡಿಕೇಷನ್(NOTE)ನ ಅಧ್ಯಕ್ಷರಾಗಿರುವ ಕ್ಯಾನ್ಸರ್ ತಜ್ಞ ಡಾ. ಶೇಖರ್ ಸಲ್ಕಾರ್, ‘ಬಚ್ಚನ್ ಅವರು ಯೂತ್ ಐಕಾನ್ ಆಗಿದ್ದು, ಅವರ ಈ ಹೆಜ್ಜೆ ಯುವ ಜನಾಂಗದ ಮನಃಪರಿವರ್ತನೆಗೆ ಸಹಾಯಕವಾಗುತ್ತದೆ’ ಎಂದಿದ್ದಾರೆ.