ಚೆನ್ನೈ ನಲ್ಲಿ ಇತ್ತೀಚೆಗೆ ನಡೆದ 33ನೆ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ‘ಮಾರಿಕಾಡು’ ನಾಟಕ ತಂಡ ಅತ್ಯುತ್ತಮ ಸಾಧನೆಯೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ಸೆಪ್ಟೆಂಬರ್ ನಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ನಾಟಕ ಸ್ಪಧೆಯಲ್ಲಿ ಭಾಗವಹಿಸುವುದರೊಂದಿಗೆ 17 ಬಲಾಢ್ಯ ತಂಡಗಳೊಂದಿಗಿನ ಪ್ರಭಲ ಪೈಪೋಟಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಎಸ್.ಡಿ.ಎಂ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಮಂಗಳೂರು ವಿಶ್ವ ವಿದ್ಯಾಲಯವನ್ನು ಸೌತ್ ಝೋನ್ ನಲ್ಲಿ ಪ್ರತಿನಿಧಿಸುವ ಅರ್ಹತೆ ಗಳಿಸಿಕೊಳ್ಳುವುದರ ಜೊತೆಗೆ, ಉತ್ತಮ ನಿರ್ದೇಶನ, ಉತ್ತಮ ನಟಿ,ಉತ್ತಮ ಬೆಳಕು ಹಾಗೂ ರಂಗ ಸಜ್ಜಿಕೆ, ಪ್ರಶಸ್ತಿಗಳಿಸಿ ಪ್ರಥಮ ಸ್ಥಾನದೊಂದಿಗೆ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿತ್ತು.
ಡಾ. ಚಂದ್ರಶೇಖರ್ ಕಂಬಾರರ ರಚನೆಯ ಮಾರಿಕಾಡು ನಾಟಕ ಮೂಲತಃ ವಿಲಿಯಂ ಶೇಕ್ಸ್ ಪಿಯರ್ನ ಮ್ಯಾಕ್ಬೆತ್ ನಾಟಕದ ಕನ್ನಡ ರೂಪಾಂತರವಾಗಿದೆ. ಪ್ರಸ್ತುತ ಈ ನಾಟಕವು ಎಸ್.ಡಿ.ಎಂ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶಿವಶಂಕರ್ ನಿನಾಸಂ ಅವರ ವಿನ್ಯಾಸ ಹಾಗೂ ನಿರ್ದೇಶನದೊಂದಿಗೆ, ಸುಮಾರು 13 ವಿದ್ಯಾರ್ಥಿಗಳನ್ನೊಳಗೊಂಡ ಈ ಮಾರಿಕಾಡು ನಾಟಕ ಅತ್ಯುತ್ತಮವಾಗಿ ಮೂಡಿಬಂದು ಎಲ್ಲರ ಮೆಚ್ಚುಗೆ ಗಳಿಸಿದೆ.
ದಕ್ಷಿಣ ವಲಯ ಮಟ್ಟದಲ್ಲಿ ನಡೆದ 33ನೆ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಿದ್ದ ನಾಟಕ ತಂಡ ಸುಮಾರು 31 ವಿಶ್ವವಿದ್ಯಾನಿಲಯಗಳ ನಡುವಿನ ಪೈಪೋಟಿಯೊಂದಿಗೆ ತೃತೀಯ ಸ್ಥಾನಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಸ್ಪರ್ಧೆಯ ನಿಯಮದ ಪ್ರಕಾರ ತೇರ್ಗಡೆಗೊಂಡ 3 ತಂಡಗಳು ರಾಷ್ಠ್ರ ಮಟ್ಟಕ್ಕೆ ಪ್ರತಿನಿಧಿಸುವ ಅರ್ಹತೆಯೊಂದಿಗೆ ದಕ್ಷಿಣ ಭಾರತದಿಂದ 3 ತಂಡಗಳು ಜಾರ್ಖಾಂಡ್ ನ ರಾಂಚಿಯಲ್ಲಿ ನಡೆಯಲಿರುವ ಸ್ಪರ್ಧೆಗೆ ಆಯ್ಕೆಗೊಂಡಿದೆ.
ಪಾತ್ರವರ್ಗದಲ್ಲಿ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಅನ್ವಿತ್ ಗೌಡ, ಅಂಕಿತ್ ಆಚಾರ್ಯ, ಶಶಿಪ್ರಭಾ,ಸಂಪದ ಎಸ್ ಭಾಗವತ್, ಚೇತನ್.ಡಿ, ಪದ್ಮರೇಖ ಕೆ ಭಟ್, ನಿಶಾ ಭಟ್ ಉಜಿರೆ, ಅರ್ಚನ, ಶಿಲ್ಪಾಶ್ರೀ, ಶರಣ್ ಕುಮಾರ್,ಸಿಂಧು ಲಕ್ಷ್ಮೀ, ಆದಿತ್ಯಾ ದೊಂಡೋಲೆ ಉತ್ತಮ ರೀತಿಯಲ್ಲಿ ನಟಿಸಿ ಪಾತ್ರಕ್ಕೆ ಜೀವತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ತಂಡದ ಈ ಸಾಧನೆಗೆ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.