ಗುಂಡ್ಲುಪೇಟೆ: ಕೊರೋನ ಅಟ್ಟಹಾಸ ವಿಶ್ವಾದ್ಯಂತ ಸಾವಿನ ಮೃದಂಗ ಬಾರಿಸುತ್ತಿದ್ದರೂ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿ ಚಿತ್ರಿಕರಣ ಮಾಡುತ್ತಿರುವುದು ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಕಂಡು ಬಂದಿದೆ.
ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಚಿತ್ರೀಕರಣ ಹಂಗಳ ಗ್ರಾಮದಲ್ಲಿ ನಡೆಯುತ್ತಿದೆ. ಸರ್ಕಾರ ಒಂದು ಕಡೆ ಐವತ್ತು ಜನರು ಸೇರಬಾರದು ಎಂದು ಹೇಳುತ್ತಿದೆ ಜತೆಗೆ ಮಾಸ್ಕ್ ಹಾಕದವರಿಂದ ಪಟ್ಟಣದಲ್ಲಿ ಸಾವಿರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐನೂರು ರೂಪಾಯಿಯಂತೆ ದಂಡ ವಸೂಲಿ ಮಾಡಲಾಗುತ್ತಿದೆ. ಆದರೆ ಸಾಮಾಜಿಕ ಅಂತರವೂ ಇಲ್ಲದೆ ಚಿತ್ರೀಕರಣ ನಡೆಯುತ್ತಿದ್ದು, ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಇನ್ನು ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ದಿನದಿಂದ ದಿನ ಹೆಚ್ಚಾಗುತ್ತಿದ್ದರೂ ಚಿತ್ರಿಕರಣಕ್ಕೆ ಗ್ರಾಮ ಪಂಚಾಯತಿ ಅನುಮತಿ ನೀಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಚಿತ್ರೀಕರಣಕ್ಕೆ ಆಗಮಿಸಿದ ನಟ ಶ್ರೀಮುರುಳಿ ಅವರನ್ನು ನೋಡಲು ಸಾವಿರಾರು ಜನರು ಜಮಾವಣೆಯಾಗಿದ್ದು ಕಂಡು ಬಂತು. ಮದಗಜ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಚಾಲೆಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಕುಲದೀಪ್ ಮಾತನಾಡಿ ಚಿತ್ರಿಕರಣಕ್ಕೆ ಅನುಮತಿ ನೀಡಿಲ್ಲ ಎಂದು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಹೇಳಿದ್ದಾರೆ. ಒಂದು ವೇಳೆ ಅನುಮತಿ ನೀಡಿದ್ದರೂ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು ಅಥವಾ ಉಲ್ಲಂಘನೆ ಮಾಡಿದ್ದರೆ ಪೊಲೀಸ್ ಇಲಾಖೆ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.
ಇನ್ನು ಹಂಗಳ ಗ್ರಾಮದ ನಿವಾಸಿ ಮಹದೇವಪ್ಪ ಮಾತನಾಡಿ ಗ್ರಾಮ ಪಂಚಾಯತಿ ಚಿತ್ರೀಕರಣಕ್ಕೆ ಅನುಮತಿ ನೀಡಿ ನಮ್ಮ ಗ್ರಾಮಕ್ಕೆ ಕೊರೋನಾ ಆಹ್ವಾನ ನೀಡಿದಂತಾಗಿದೆ. ಹೊರರಾಜ್ಯ ಹಾಗೂ ಹೊರ ಜಿಲ್ಲೆ ಜನರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಕೂಡಲೇ ಚಿತ್ರೀಕರಣ ತಂಡದ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.