ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 4’ ಶೀಘ್ರದಲ್ಲಿ ಆರಂಭವಾಗಲಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಯಾರೆಲ್ಲಾ ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಯಲ್ಲಿ ಇರ್ತಾರೆ ಅನ್ನುವ ಅಂತೆ ಕಂತೆ ಸುದ್ದಿಗಳು ಸಹಜವಾಗಿರುವ ಬೆನ್ನಲ್ಲೇ, ಎಂದಿನಂತೆ ಈ ಬಾರಿಯು ಅನೇಕ ಸೆಲೆಬ್ರಿಟಿಗಳು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ.
ಕಾಮಿಡಿ ಕಿಂಗ್ ಕೋಮಲ್ ಈ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಿಲ್ಲ ಹಾಗೂ ತಮಗೆ ಯಾವುದೇ ಆಫರ್ ಬಂದಿಲ್ಲ, ಬಂದರೂ ಹೋಗುವುದಿಲ್ಲ ಎಂದಿದ್ದಾರೆ. ನವೀನ್ ಕೃಷ್ಣ ಅವರು ‘ಗಿರಿಜಾ ಕಲ್ಯಾಣ’ ಧಾರಾವಾಹಿಯ ನಿರ್ದೇಶನದಲ್ಲಿ ಬಿಝಿಯಾಗಿರುವುದರಿಂದ ಬಿಗ್ ಬಾಸ್ ನಲ್ಲಿ ಭಾಗವಹಿಸುವುದು ಅನುಮಾನವಾಗಿದ್ದು, ಹಾಗೆಯೇ ಸುಧಾರಣೀಯವರ ಹೆಸರು ಕೂಡ ಕೇಳಿಬಂದಿದ್ದು ತಾವೂ ಕೂಡಾ ಯಾವುದೇ ಕಾರಣಕ್ಕೂ ಬಿಗ್ ಬಾಸ್ ಗೆ ಹೋಗಲ್ಲ ಎನ್ನುತ್ತಿದ್ದಾರೆ.
ಈ ಹಿಂದೆ ಪೂಜಾ ಗಾಂಧಿ ಕೂಡ ಇದು ಸುಳ್ಳು ಸುದ್ದಿ, ಹಾಗೂ ಆಸಕ್ತಿಯಿಲ್ಲವೆಂದು ಹೇಳಿದ್ದು, ಕೊನೆಗೆ ಅವರು ಇನ್ನೊಂದು ಸೀಸನ್ ನಲ್ಲಿ ಭಾಗವಹಿಸಿದ ವಿಷಯ ಎಲ್ಲರಿಗೂ ಗೊತ್ತಿದೆ. ಈ ಬಾರಿಯೂ ರಕ್ಷಿತಾ, ಕೋಮಲ್, ಅನುಪ್ರಭಾಕರ್, ನವೀನ್ ಕೃಷ್ಣ, ಅನಿರುದ್ದ್, ಸುಧಾರಾಣಿ, ರಾಗಿಣಿ, ಗಡ್ಡಪ್ಪ, ಯೋಗಿ, ಶೀತಲ್ ಶೆಟ್ಟಿ, ಸಿದ್ದಾರ್ಥ, ತಾರಾ, ಡಾನಿಶ್ ಶೇರ್, ಕಿರಿಕ್ ಕೀರ್ತಿ, ‘ಒಗ್ಗರಣೆ ಡಬ್ಬಿ’ ಮುರಳಿ, ‘ಖುಷಿ’ ತರುಣ್ ಅವರುಗಳ ಹೆಸರು ಕೇಳಿ ಬಂದಿದ್ದು, ಕೆಲವರು ಇದೆಲ್ಲಾ ಸುಳ್ಳು ಅನ್ನುತ್ತಿದ್ದು, ಕಾರ್ಯಕ್ರಮ ಆರಂಭವಾದ ನಂತರವೇ ಎಲ್ಲಾ ಅಂತೆಕಂತೆಗಳಿಗೆ ಉತ್ತರ ಸಿಗಲಿದ್ದು, ಕಾರ್ಯಕ್ರಮ ಅಕ್ಟೋಬರ್ ನಿಂದ ಪ್ರಾರಂಭವಾಗಲಿದೆ.