ಬೆಂಗಳೂರು: ಸಾಮಾನ್ಯವಾಗಿ ಮದುವೆಯ ನಂತರ ನಟನೆಯಿಂದ ದೂರ ಸರಿಯುವ ನಟಿಯರ ನಡುವೆ ಮದುವೆಯ ನಂತರವೂ ನಟಿಸುವುದಾಗಿ ನಟಿ ಪ್ರಿಯಾ ಮಣಿ ಹೇಳಿದ್ದಾರೆ.
ಉದ್ಯಮಿ ಮುಸ್ತಾಫರಾಜನನ್ನು ವಿವಾಹದ ಬಳಿಕ ಸುದ್ದಿಗಾರ ಪ್ರಶ್ನೆಗೆ ಉತ್ತರಿಸುತ್ತಾ ನಟನೆಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಜಯನಗರದ ನೋಂದಣಿ ಕಚೇರಿಯಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಸರಳವಿವಾಹವಾದ ಅವರನ್ನು ಸುತ್ತುವರಿದ ಸುದ್ದಿಗಾರರು ಹಲವು ಪ್ರಶ್ನೆಗಳನ್ನು ಕೇಳಿದರಾದರೂ ಅವರಿಂದ ಅದ್ಯಾವುದಕ್ಕೂ ಉತ್ತರಗಳು ಬರಲಿಲ್ಲ. ಇನ್ನು ಮದುವೆ ಕುರಿತಂತೆ ಮಾತನಾಡಿದ ಅವರು ಮದುವೆಯನ್ನು ಸರಳವಾಗಿ ಮಾಡಿಕೊಂಡಿದ್ದು ಗುರುವಾರ ತಮ್ಮ ಅದ್ದೂರಿ ವಿವಾಹ ಆರತಕ್ಷತೆಯನ್ನು ಕೊತ್ತನೂರಿನ ಎಲೆನ್ ಕನ್ವೆಷನ್ ಹಾಲ್ ನಲ್ಲಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ.
ಪ್ರಿಯಾಮಣಿ ಹಾಗೂ ಮುಸ್ತಾಫರ ನಿಶ್ಚಿತಾರ್ಥ ಈ ಹಿಂದೆಯೇ ನಡೆದಿತ್ತು. ಈ ಕುರಿತಂತೆ ಅನೇಕ ಊಹಾಪೋಹಗಳು ಕೇಳಿ ಬಂದಿತ್ತು. ಇದೀಗ ವಿವಾಹವಾಗುವುದರ ಮೂಲಕ ಅದಕ್ಕೆಲ್ಲ ತೆರೆ ಎಳೆದಿದ್ದಾರೆ. ಉಲ್ಲಾಂ ಎಂಬ ತಮಿಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಪ್ರಿಯಾಮಣಿ ಬಳಿಕ ಕನ್ನಡ, ತೆಲುಗು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಗಮನಸೆಳೆದಿದ್ದರು. ರಾಮ್ ಚಿತ್ರದ ಮೂಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ ಪಂಚಭಾಷಾ ನಟಿ ಎಂಬ ಹೆಸರು ಪಡೆದಿರುವ ಅವರು ಇದೀಗ ವಿವಾಹವಾಗುವ ಮೂಲಕ ಬಹಳಷ್ಟು ದಿನಗಳಿಂದ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ