ಮಡಿಕೇರಿ : ಹಿರಿಯ ಸಾಹಿತಿ ನಾಗೇಶ್ ಕಾಲೂರು ಬರೆದಿರುವ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾದ, ಕೊಡವ ಮಕ್ಕಡ ಕೂಟ ಪ್ರಕಟಿಸಿದ ಕಾದಂಬರಿ ಆಧಾರಿತ ಕೊಡವ ಚಲನಚಿತ್ರ ‘ನಾಡ ಪೆದ ಆಶಾ’ ಸೆ.6ರಂದು ತೆರೆ ಕಾಣಲಿದೆ.
ಚಿತ್ರ ತಂಡದ ಪ್ರಮುಖರು ಮಡಿಕೇರಿಯ ಪತ್ರಿಕಾ ಭವನದಲ್ಲಿ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಈ ಕುರಿತು ಮಾಹಿತಿ ನೀಡಿದರು. ಸೆ.6ರಂದು ಬೆಳಗ್ಗೆ 10 ಗಂಟೆಗೆ ಮೂರ್ನಾಡುವಿನ ಕೊಡವ ಸಮಾಜದಲ್ಲಿ ನಡೆಯುವ ಚಲನಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಕೋಡಂಬೂರು ಶ್ರೀ ಭದ್ರಕಾಳಿ ದೇವಾಲಯದ ಅಧ್ಯಕ್ಷ ಹಾಗೂ ಮೂರ್ನಾಡು ಗ್ರಾ.ಪಂ ಸದಸ್ಯ ಮೂಡೇರ ಅಶೋಕ್ ಅಯ್ಯಪ್ಪ, ಕೊಡವ ಭಾಷಿಕ ಜನಾಂಗದ ಅಧ್ಯಕ್ಷ ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಮೇಚಿರ ಸುಭಾಷ್ ನಾಣಯ್ಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ನೆರವಂಡ ಅನೂಪ್, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಹರೀಶ್, ಮೂರ್ನಾಡು ಗ್ರಾ.ಪಂ ಉಪಾಧ್ಯಕ್ಷ ಮುಂಡಂಡ ವಿಜು ತಿಮ್ಮಯ್ಯ ಪಾಲ್ಗೊಳ್ಳಲಿದ್ದಾರೆ.
ಅನೇಕ ಸಿನಿಮಾಗಳನ್ನು ನಿರ್ದೇಶಿಸಿ, ನಟರಾಗಿಯೂ ಅಭಿನಯಿಸಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಮತ್ತು ಕೊಡವ ಭಾಷೆಯ ಚಲನಚಿತ್ರಕ್ಕೆ ಕೀರ್ತಿ ತಂದು ಕೊಟ್ಟಿರುವ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ‘ನಾಡ ಪೆದ ಆಶಾ’ ಚಿತ್ರದ ನಿರ್ಮಾಪಕರಾಗಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತಿರ ಯಶೋದಾ ಪ್ರಕಾಶ್ ಕಾರ್ಯನಿರ್ವಹಿಸಿದ್ದಾರೆ.
ಚಿತ್ರ ಪ್ರದರ್ಶನದ ಸ್ಥಳ: ಸೆ.6 ಮತ್ತು 7 ರಂದು ಮೂರ್ನಾಡು ಕೊಡವ ಸಮಾಜ ಸೆ.9,10,11 ೧೦ ರಂದು ನಾಪೋಕ್ಲು ಕೊಡವ ಸಮಾಜ, ಸೆ.14,15,16 ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಬೆಳಗ್ಗೆ 10.45, ಮಧ್ಯಾಹ್ನ 1, 3.30 ಮತ್ತು ಸಂಜೆ 6 ಗಂಟೆ ಸೇರಿ ಪ್ರತಿದಿನ ನಾಲ್ಕು ಪ್ರದರ್ಶನಗಳಿರುತ್ತವೆ.