ಮಂಡ್ಯ: ಗಾನಮಾಂತ್ರಿಕ ಎಸ್ಪಿಬಿ ಅವರ ಮಾತೃಭಾಷೆ ಕನ್ನಡ ಅಲ್ಲದಿದ್ದರೂ ಸಹ ಕನ್ನಡಭಾಷೆ ಬಗ್ಗೆ ಅಪಾರ ಗೌರವವಿಟ್ಟುಕೊಂಡಿದ್ದರು. ಅವರನ್ನು ಎಂದಿಗೂ ಮರೆಯಲಾಗದು ಎಂದು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಕರ್ನಾಟಕ ಸಂಘದ ಕುವೆಂಪು ಬಯಲು ರಂಗ ಮಂದಿರದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಕರ್ನಾಟಕ ಸಂಘ, ಮಂಡ್ಯ ಮತ್ತು ಕರಾವಳಿ ಸಾಂಸ್ಕೃತಿಕ ಒಕ್ಕೂಟ ಆಯೋಜಿಸಿದ್ದ ಡಾ.ಎಸ್.ಪಿ.ಬಿ. ನೆನಪು-ಗೀತಾರ್ಪಣೆ ಕಾರ್ಯಕ್ರಮದಲ್ಲಿ ಗಾಯಕ, ನಿವೃತ್ತ ಅಬಕಾರಿ ಅಧಿಕಾರಿ ವೆಂಕಟೇಶ್ಮೂರ್ತಿ ಶಿರೂರ ಅವರನ್ನು ಅಭಿನಂದಿಸಿ ಮಾತನಾಡಿದರು.
ಮಾತೃ ಭಾಷೆ ಇವರದ್ದಾಗದಿದ್ದರೂ ಸಹ ಕನ್ನಡದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಖ್ಯಾತ ಗಾಯಕ ಎಸ್.ಪಿ.ಬಿ. ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ ಎಂದು ನುಡಿದರು.
ಕೊರೋನಾ ಎಲ್ಲರ ಬದುಕು ಮತ್ತು ಆಸೆಯನ್ನು ಕಿತ್ತುಕೊಂಡಿದೆ. ಪ್ರಸ್ತುತದಲ್ಲಿ ಕೊಂಚ ಕೊಂಚ ಕಡಿಮೆಯಾಗುತ್ತಿದೆ. ಆದರೂ ಇದು ದೇಶಕ್ಕೆ ಅಪ್ಪಳಿಸಿದ ರೀತಿ ನೆನಪಿಸಿಕೊಂಡರೆ ಭಯವಾಗುತ್ತದೆ. ಎಂತಹ ಮಹನೀಯರು ಮತ್ತು ಅಮಾಯಕರನ್ನು ಬಲಿ ತೆಗೆದುಕೊಂಡ ಕೊರೋನಾ ಬೇಗ ನಾಶವಾಗಲಿ ಎಂಬುದು ನನ್ನ ಆಶಯವಾಗಿದೆ ಎಂದರು.
ಸಂಗೀತದ ನೆಪವಿದ್ದರೆ ಮಾತ್ರ ಎಲ್ಲವನ್ನೂ ಸಾಧಿಸುವ ಹಂಬಲ ಹೆಚ್ಚುತ್ತದೆ. ಏಕೆಂದರೆ, ಮನಸ್ಸು ಶಾಂತವಾಗಿರುತ್ತದೆ. ಸಂಗೀತದಲ್ಲಿ ಯಶಸ್ಸು ಸಾಧಿಸಿದವರನ್ನು ನೆನಪಿಸಿಕೊಂಡು, ಅದೇ ಹಾದಿಯಲ್ಲಿ ಸಾಗುತ್ತಿರುವ ಕಿರಿಯ ಸಂಗೀತ ಸಾಧಕರನ್ನು ಸನ್ಮಾನಿಸುವುದು ಉತ್ತಮ ಕೆಲಸವಾಗಿದೆ. ಅದರಲ್ಲಿ ಎಸ್ಪಿಬಿ ಅವರನ್ನು ಸ್ಮರಿಸುವ ಕೆಲಸ ಅವಿಸ್ಮರಣೀಯ ಎಂದು ಹೊಗಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಾಯಕ, ನಿವೃತ್ತ ಅಬಕಾರಿ ಅಧಿಕಾರಿ ವೆಂಕಟೇಶ್ಮೂರ್ತಿ ಶಿರೂರ, ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದರು.