ಉಜಿರೆ: ಶ್ರೀ.ಧ.ಮಂ. ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಉಜಿರೆ ಗ್ರಾಮ ಪಂಚಾಯತ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಂದ ಗ್ರಾಮಸ್ವರಾಜ್ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಅಮೃತ ಗ್ರಾಮ ಸಮಿತಿಯ ಅಧ್ಯಕ್ಷರು ಮತ್ತು ಲಕ್ಷ್ಮಿ ಗ್ರೂಪ್ ನ ಮುಖ್ಯಸ್ಥರಾದ ಮೋಹನ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲಾ-ಕಾಲೇಜು, ಕಚೇರಿಗಳಲ್ಲಿ ನಡೆಯುವ ಹಾಗೆ ಮನೆಮನೆಯಲ್ಲೂ ತಿರಂಗಾ ಹಾರಬೇಕು. ಈ ಸಲುವಾಗಿ ವಿದ್ಯಾರ್ಥಿಗಳು ಪಂಚಾಯತ್ ಸಹಕಾರದಿಂದ ಪ್ರತಿ ಮನೆಗೂ ಸ್ವಾತಂತ್ರ್ಯದ ಮಹತ್ವ ತಿಳಿಸಿ, ಜನರಿಗೆ ಅರಿವು ಮೂಡಿಸುವುದರಲ್ಲಿ ಯಶಸ್ವಿಯಾಗಬೇಕು ಎಂದು ಹಾರೈಸಿದರು.
ಪ್ರಾಸ್ತವಿಕ ಮಾತುಗಳನ್ನಾಡಿದ ಶ್ರೀ.ಧ.ಮ. ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಲೀಪ್, ವಿದ್ಯಾರ್ಥಿಗಳಿಂದ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ಈ ದಿಸೆಯಲ್ಲಿ ಗ್ರಾಮ ಸ್ವರಾಜ್ ವಿಭಾಗದ ಹೆಮ್ಮೆಯ ಕಾರ್ಯಕ್ರಮ. ಪ್ರತಿ ಬಾರಿಯೂ ಯಶಸ್ವಿಗೆ ವಿದ್ಯಾರ್ಥಿಗಳೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಜಿರೆ ಗ್ರಾಮ ಪಂಚಾಯತ್ ಪಿ.ಡಿ.ಒ. ಪ್ರಕಾಶ್ ಶೆಟ್ಟಿ, ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ನಾಡಿನ ರಾಷ್ಟ್ರಧ್ವಜದ ಗೌರವ ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೇಶಭಕ್ತಿಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿರುವುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಮತ್ತು ಗ್ರಾ.ಪಂ. ಸದಸ್ಯರ ಸಹಕಾರದೊಂದಿಗೆ ೧೧ ಗುಂಪುಗಳಾಗಿ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಗ್ರಾಮ ಸ್ವರಾಜ್ ಕಲ್ಪನೆಯ ಸಾಮಾಜಿಕ -ರಾಜಕೀಯ ಅರಿವು ಮೂಡಿಸುವುದರ ಜೊತೆಗೆ ಜನರಿಗೆ ಅಮೃತ ಮಹೋತ್ಸವದ ಮಹತ್ವವನ್ನು ತಿಳಿಸಿ, ಹರ್-ಘರ್ ತಿರಂಗ ಅಭಿಯಾನವನ್ನು ನಡೆಸಲಾಯಿತು. ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ ಕರಪತ್ರವನ್ನು ಮನೆಮನೆ ಹಂಚಿ, ಬಾವುಟವನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಪುಷ್ಪವತಿ ಆರ್ ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಜಯಂತ್ ಯು ಬಿ, ಉಪನ್ಯಾಸಕರಾದ ನಟರಾಜ್, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಸಭಾ ಕಾರ್ಯಕ್ರಮವನ್ನು ವಿದ್ಯಾರ್ಥಿ ಶಾಮಪ್ರಸಾದ್ ನಿರೂಪಿಸಿ, ಮನೋಜ್ ವಂದಿಸಿದರು.