ಮೂಡುಬಿದಿರೆ: ಉದ್ಯಮಶೀಲತೆಗೆ ವಯಸ್ಸಿನ ಹಂಗಿಲ್ಲ. ಉತ್ತಮ ಯೋಚನೆ ಇದ್ದರೆ ಯೋಜನೆಗೆ ಬಂಡವಾಳ ಸಿಗುತ್ತದೆ. ವಿದ್ಯಾರ್ಥಿಗಳು ಈ ದಿಶೆಯೆಡೆ ಹೆಜ್ಜೆ ಇಡಿ. ಸಮಾಜದ ಬೇಡಿಕೆಗೆ ಸ್ಪಂದಿಸಿ. ಎಲ್ಲರೂ ಅಸಾಧ್ಯ ಎಂದರೆ ಅದುವೇ ನಿಮ್ಮಿಂದ ಸಾಧ್ಯ. ಭಾರತ ವೇಗವಾಗಿ ಬದಲಾಗುತ್ತಿದೆ. ಯುವಜನತೆಯು ದೇಶದ ಭವಿಷ್ಯಕ್ಕಿಂತ ಹೆಚ್ಚಾಗಿ ವರ್ತಮಾನ. ಉದ್ಯೋಗ ಅನ್ವೇಷಕರ ಬದಲು ಉದ್ಯೋಗದಾತರಾಗಿ ಎಂದು ಜ್ಯೋತಿ ಲ್ಯಾಬ್ಸ್ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ್ ಕಾಮತ್ ಯುವ ಜನತೆಗೆ ಕರೆ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ, ಯಂಗ್ ಇಂಡಿಯನ್ ಮಂಗಳೂರು ಘಟಕ, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ), ಜಿ20, ಯುವ, ವೈ20 ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ‘ದೇಶದ ಭವಿಷ್ಯಕ್ಕಾಗಿ ವ್ಯವಹಾರಗಳ ಮರುಚಿತ್ರಣದೆಡೆಗೆ ಯುವ ಭಾರತೀಯ ಸಾಧಕರ ಜೊತೆ ಸಂವಾದ- ವೈ-20 ಮಾತುಕತೆಯಲ್ಲಿ ಅವರು ಮಾತನಾಡಿದರು.
ಸಿಐಐ ಮಂಗಳೂರು ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕಲ್ಬಾವಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ ನಡೆಯುವ ಬುದ್ಧಿಮತ್ತೆಯ ಚರ್ಚೆ- ಮಾತುಕತೆ ದೇಶದ ಅಭಿವೃದ್ಧಿಯ ರೂಪುರೇಷೆಯಲ್ಲಿ ಕೊಡುಗೆ ನೀಡಲಿದೆ ಎಂದರು.
ಭಾರತದ ಸರೋವರ ಮನುಷ್ಯ(ಲೇಕ್ಮ್ಯಾನ್) ಆನಂದ್ ಮಲ್ಲಿಗೌಡ್, ಕೋಡ್ ಕ್ರಾಫ್ಟ್ ಟೆಕ್ನಾಲಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದೀಕ್ಷಿತ್ ರೈ, ಇಡಬ್ಲ್ಯೂಆರ್ಜಿ ಸಂಯೋಜಕ ಹಾಗೂ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ, ಉದ್ಯಮಿ ದಿವ್ಯಾ ಹೆಗ್ಡೆ, ಇಸಮುದಾಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಇಒ ಅನೂಪ್ ಪೈ. ಹೆಲ್ತ್ ಪ್ಲಿಕ್ಸ್ ಟೆಕ್ನಾಲಜಿ ಮತ್ತು ಜಿನೊ ಟೆಕ್ನಾಲಜಿ ಸಂಸ್ಥಾಪಕ ರಘುರಾಜ್ ಸುಂದರ್ರಾಜು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಯಂಗ್ ಇಂಡಿಯನ್ ಮಂಗಳೂರು ಘಟಕ ಅಧ್ಯಕ್ಷೆ ಸಮೀಕ್ಷಾ ಶೆಟ್ಟಿ ಹಾಗೂ ಆರ್ಕೀವಾದ ಏಷ್ಯಾ ಫೆಸಿಪಿಕ್ ವ್ಯವಸ್ಥಾಪಕ ನಿರ್ದೇಶಕ ಆಶಿತ್ ಹೆಗ್ಡೆ ಸಂವಾದ ನಡೆಸಿಕೊಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಸಿಐಐನ ಉಪಾಧ್ಯಕ್ಷ ಅಜಿತ್ ಕಾಮತ್, ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಯಂಗ್ ಇಂಡಿಯನ್ ಮಂಗಳೂರು ಘಟಕ ಅಧ್ಯಕ್ಷೆ ಸಮೀಕ್ಷಾ ಶೆಟ್ಟಿ ಸ್ವಾಗತಿಸಿದರು. ಯಂಗ್ ಇಂಡಿಯನ್ ಮಂಗಳೂರು ಘಟಕದ ಕೋ ಛೇರ್ ಸಿಎ ಸಲೋಮಿ ಲೋಬೊ ಫೆರೆರಾ ವಂದಿಸಿದರು. ಪ್ರತೀಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡದ 5 ಕಾಲೇಜುಗಳಿಂದ 350ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.