ಮೂಡುಬಿದಿರೆ: ವಿಜ್ಞಾನದ ಬೆಳವಣಿಗೆಯು ಮನುಷ್ಯನ ಹಲವಾರು ಸಂಕಷ್ಟಗಳನ್ನು ದೂರ ಮಾಡಿದೆ. ಆರೋಗ್ಯ ವಲಯದ ಮಹತ್ತರ ಬದಲಾವಣೆಯು ಪ್ರಗತಿಯ ಸಂಕೇತ. ಪರಿಸರ ಪೂರಕ ಅಭಿವೃದ್ಧಿ ಸಾಧಿಸಲು ಪ್ರತಿಯೊಬ್ಬರು ಚಿತ್ತ ಹರಿಸಬೇಕು. ಭೂಮಿಯನ್ನು ರಕ್ಷಿಸಿ, ಪೋಷಿಸುವ ಜವಾಬ್ದಾರಿ ಯುವಜನರದ್ದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಡಾ.ರವಿ ಡಿ.ಆರ್ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ವೈದಕೀಯ ಹಾಗೂ ಪರಿಸರ ಜೈವಿಕ ತಂತ್ರಜ್ಞಾನದ ಇತ್ತೀಚಿನ ಆವಿಷ್ಕಾರದ ಕುರಿತು ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಆಳ್ವಾಸ್ ಕಾಲೇಜಿನ ಪ್ರಾಶುಂಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ.ರಾಮ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ತೇಜಸ್ವಿನಿ ಭಟ್ ನಿರೂಪಿಸಿದರು. ನವ್ಯಾ ಶೇಟ್ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಮೌಖಿಕ ಪ್ರಸ್ತುತಿ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಯೆನಪೋಯಾ ಕಾಲೇಜು ಪಡೆದರೆ, ಪೋಸ್ಟರ್ ಪ್ರಸೆಂಟೇಶನ್ನಲ್ಲಿ ಯೆನಪೋಯಾ ಕಾಲೇಜು ಪ್ರಥಮ, ಸಂತ ಅಲೋಷಿಯಸ್ ಕಾಲೇಜು ಹಾಗೂ ಆಳ್ವಾಸ್ ಕಾಲೇಜು ದ್ವಿತೀಯ ದ್ವಿತೀಯ ಸ್ಥಾನ ಪಡೆಯಿತು.