ಮಂಗಳೂರು: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾಯೋಜಿಸಿದ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್, ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಿಗಳ ಪಾರ್ಕ್ (ಎಸ್ ಟಿ ಇಪಿ) ಎನ್ಐಟಿಕೆ , ಜೆ ಎನ್ ವಿ ದಕ್ಷಿಣ ಕನ್ನಡ ಇವರ ಸಹಭಾಗಿತ್ವದಲ್ಲಿ, ನವೆಂಬರ್ 17, 2022 ರಂದು “ವಿಜ್ಞಾನ ಜ್ಯೋತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವು ಹುಡುಗಿಯರಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಹೆಚ್ಚಿಸಲು ಮತ್ತು ಯಾವುದೇ ಲಿಂಗ ಪಕ್ಷಪಾತವಿಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದ ವೈವಿಧ್ಯಮಯ ಕ್ಷೇತ್ರಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳು ಎನ್ಐಟಿಕೆ ಯ ಕೇಂದ್ರೀಯ ಸಂಶೋಧನಾ ಸೌಲಭ್ಯ (ಸಿ ಆರ್ ಎಫ್) ಭೇಟಿ ನೀಡಿ ಅದರ ಲಭ್ಯವಿರುವ ವಿಶ್ವ ದರ್ಜೆಯ ಸಂಶೋಧನಾ ಸೌಲಭ್ಯಗಳ ಬಗ್ಗೆ ತಿಳಿದುಕೊಂಡರು.
ಎನ್ಐಟಿಕೆ ಸುರತ್ಕಲ್ನಲ್ಲಿ ಸ್ಥಾಪಿಸಲಾದ ಜೈವಿಕ ಅನಿಲ ಘಟಕದಲ್ಲಿ (ದಿನಕ್ಕೆ 500 ಕೆಜಿ) ಆಹಾರ ತ್ಯಾಜ್ಯ ಮರುಬಳಕೆ ಪ್ರಕ್ರಿಯೆಯಿಂದ ಉತ್ಪತ್ತಿಯಾಗುವ ಜೈವಿಕ ಅನಿಲದ ಕುರಿತು ಒಳನೋಟಗಳನ್ನು ಪಡೆಯಲು ವಿದ್ಯಾರ್ಥಿಗಳು ಇಟಲಿಯ ಮೈರೆ ಟೆಕ್ನಿಮಾಂಟ್ ಕಂಪನಿಯು ಪ್ರಾಯೋಜಿಸಿರುವ ಜೈವಿಕ ತ್ಯಾಜ್ಯ ಮರುಬಳಕೆ ಘಟಕಕ್ಕೆ ಭೇಟಿ ನೀಡಿದರು.
ಅವರು ಅನೇಕ ರೀತಿಯ ಡ್ರೋನ್ಗಳು ಮತ್ತು ಸಿಎಸ್ ಡಿ ಯ ಉನ್ನತ 3ಡಿ ಮುದ್ರಣ ತಂತ್ರಜ್ಞಾನದ ಬಗ್ಗೆ ತಿಳಿಯಲು ಎನ್ಐಟಿಕೆ ಯಲ್ಲಿನ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್ (ಸಿಎಸ್ ಡಿ) ಗೆ ಭೇಟಿ ನೀಡಿದರು. ಇದಲ್ಲದೆ, ಅವರು ಎಸ್ ಟಿ ಇಪಿ ಮತ್ತು ಇತರ ಎನ್ಐಟಿಕೆ ಇಲಾಖೆಗಳಿಗೆ ಭೇಟಿ ನೀಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಯಾವುದೇ ಲಿಂಗ ಪಕ್ಷಪಾತವಿಲ್ಲದೆ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೆ ಕೊಡುಗೆ ನೀಡಲು ತಮ್ಮನ್ನು ತೊಡಗಿಸಿಕೊಳ್ಳ ಬೇಕೆಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಪ್ರೊ.ಜಿ.ಸಿ. ಮೋಹನ್ ಕುಮಾರ್, ಪ್ರಭಾರ ನಿರ್ದೇಶಕರು, ಪ್ರೊ.ಅರುಣ್ ಎಂ.ಇಸ್ಲೂರ್ (ಸಂಯೋಜಕರು, ಸ್ಟೆಪ್), ಮತ್ತು ಜೆಎನ್ವಿ ಮುಡಿಪು ಪ್ರಾಂಶುಪಾಲರಾದ ಪಿ.ರಾಜೇಶ್ ಉಪಸ್ಥಿತರಿದ್ದರು.