ಮಂಗಳೂರು: ವಿದ್ಯಾರ್ಥಿಗಳು ನಮ್ಮ ರಾಷ್ಟ್ರದ ಅಮೂಲ್ಯ ಸಂಪನ್ಮೂಲವಾಗಿದ್ದು, ಅವರಿಗಾಗಿ ನಾವು ಪ್ರೀತಿ, ಭ್ರಾತೃತ್ವ ಮತ್ತು ಏಕೀಕರಣದೊಂದಿಗೆ ಸುಂದರ ಮತ್ತು ಪರಿಶುದ್ಧ ಸಮಾಜವನ್ನು ನಿರ್ಮಿಸಬೇಕಿದೆ, ಎಂದು ಕರ್ನಾಟಕದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ನಗರದ ರವೀಂದ್ರ ಕಲಾಭವನದಲ್ಲಿ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನ ‘7ನೇ ಕಾಲೇಜು ವಾರ್ಷಿಕೋತ್ಸವ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ರಾಷ್ಟ್ರದ ಗೌರವ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಇನ್ನೋರ್ವ ಅತಿಥಿ, ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಾಗೂ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಡಿ.ಜ್ಯೋತಿ ಚೇಳ್ಯಾರು ಮಾತನಾಡಿ, ಸಮಾಜದಲ್ಲಿ ಗುಲಾಮಗಿರಿಯನ್ನು ತೊಡೆದುಹಾಕಲು ನಾವು ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು, ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಉತ್ತಮ ಶಿಕ್ಷಣದ ಮೂಲಕ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಗೊಂಡು, ಆತನನ್ನು ಸತ್ಪ್ರಜೆಯಾಗಿ ಬೆಳೆಸುವುದು ಶಿಕ್ಷಣ ಸಂಸ್ಥೆಯ ಜವಾಬ್ದಾರಿ. ವಿದ್ಯಾರ್ಥಿಯೂ ಸಮಾಜದಲ್ಲಿ ಸಾಧನೆ ಮಾಡಲು ಬದ್ಧನಾಗಿರಬೇಕು ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಲಕ್ಷ್ಮೀದೇವಿ ಎಲ್ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ದುರ್ಗಾ ಮೆನನ್ ಸಂಯೋಜಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ಎಂ.ಎ ತುಳು ಸಂಯೋಜಕರಾದ ಡಾ.ಮಾಧವ್ ಎಂ.ಕೆ. ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಅತಿಥಿಗಳನ್ನು ಹಿಂದಿ ಉಪನ್ಯಾಸಕ ಲಿಯಾವುದ್ದೀನ್ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ ಪವಿತ್ರಾ ಜಿ ಪರಿಚಯಿಸಿದರು. ಇತಿಹಾಸ ಉಪನ್ಯಾಸಕಿ ಮಧುಶ್ರೀ ಜೆ.ಶ್ರೀಯಾನ್ ಮತ್ತು ದೈಹಿಕ ನಿರ್ದೇಶಕ ಅಶ್ವಥ್ ಸಾಲ್ಯಾನ್ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಸ್ವಾತಿ
ಮರಿಯಾ ಡಿಸೋಜಾ ವಂದಿಸಿದರು.
ವಿದ್ಯಾರ್ಥಿ ಸಂಘದ ಉಪ ನಿರ್ದೇಶಕ ಹಾಗೂ ಎಂ.ಕಾಂ ಮತ್ತು ಎಂ.ಬಿ.ಎ (ಐಬಿ) ಸಂಯೋಜಕ ಡಾ.ಜಗದೀಶ್, ಹಾಗೂ ಜಿ.ಎಸ್.ಟಿ ಇನ್ ಡಿಪ್ಲೊಮಾ ಸಂಯೋಜಕ ಡಾ.ಯತೀಶ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ವೈವಿಧ್ಯಮಯ ಪ್ರತಿಭಾ ಪ್ರದರ್ಶನ ಗಮನ ಸೆಳೆಯಿತು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.