ಮಂಗಳೂರು, ನ.6: ಮುಂದಿನ ತಿಂಗಳಿನಿಂದಲೇ ಮಂಗಳೂರು ವಿಶ್ವ ವಿದ್ಯಾನಿಲಯ ಸಾಂಸ್ಕೃತಿಕ ನೀತಿಯನ್ನು ಅಳವಡಿಸಿಕೊಳ್ಳಲಿದೆ ಎಂದು ಮೊಡೆಪು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಪ್ರಕಟಿಸಿದ್ದಾರೆ.
ಅವರು ಇಂದು ಮಂಗಳೂರಿನ ಆರ್ಟ್ ಕೆನರಾ ಟ್ರಸ್ಟ್ ಮತ್ತು ಇಂಟಾಕ್ ಮಂಗಳೂರು ಅಧ್ಯಾಯದ ವತಿಯಿಂದ ಮಂಗಳೂರು ವಿವಿ ಎನ್.ಜಿ. ಪಾವಂಜೆ ಲಲಿತ ಕಲಾ ಪೀಠದ ಸಹಯೋಗದಿಂದ ಹೊರತಂದಿರುವ ಮೊಡೆಪು- ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಧುನಿಕ ಅಗಲಿದ ಕಲಾವಿದರ ಪರಿಚಯ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಕೊಡಿಯಾಲಗುತ್ತು ಸೆಂಟರ್ ಫಾರ್ ಆರ್ಟ್ ಆಂಡ್ ಕಲ್ಚರ್ ಹಿರಿಯ ಕಲಾವಿದರಾದ ಕೆ.ಕೆ.ಹೆಬ್ಬಾರ್, ಸಾಹಿತಿ ಶಿವರಾಮ ಕಾರಂತ, ಜಿ. ಎಸ್. ಶೆಣೈ, ಬಿ.ಜಿ.ಮೊಹಮ್ಮದ್, ಕೆ. ವಿ. ಆಚಾರ್ಯ, ರಾಮದಾಸ ಅಡ್ಯಂತಾಯ ಸಹಿತ 34 ಚಿತ್ರ ಕಲಾವಿದರ ಪರಿಚಯ, ಚಿತ್ರಗಳನ್ನು ಮೊಡೆಪು ಕೃತಿ ಹೊಂದಿದೆ. ಈ ಕಲಾವಿದರ ಕಲಾಕೃತಿಗಳ ಪ್ರದರ್ಶನವು ನಗರದ ಬಲ್ಲಾಲ್ಬಾಗ್ನ ಕೊಡಿಯಾಲ್ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಶನಿವಾರ ನವೆಂಬರ್ 12 ರವರೆಗೆ ಆಯೋಜಿಸಲಾಗಿದೆ ಮತ್ತು ಸಾರ್ವಜನಿಕರಿಗೆ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.
ವಿಶ್ವವಿದ್ಯಾಲಯ ಅಸ್ಥಿತ್ವಕ್ಕೆ ಬಂದು 43 ವರ್ಷಗಳಾಯಿತು.ವಿಶ್ವವಿದ್ಯಾಲಯ ತನ್ನದೇ ಪ್ರಾದೇಶಿಕ ಕಲಾ ಸಾಂಸ್ಕೃತಿಕ ಕಲಾಕೃತಿಗಳ ಪ್ರದರ್ಶನ ಹೊಂದಬೇಕಾಗಿದೆ. ವಿಶ್ವವಿದ್ಯಾಲಯ ತನ್ನದೇ ಆದ ಕ್ರೀಡಾ ನೀತಿ ಹೊಂದಿದ್ದು, ಈಗ ಕಲ್ಚರಲ್ ಪಾಲಿಸಿ ತರುವ ಮೂಲಕ ಸ್ಕಾಲರ್ ಶಿಪ್, ಫೆಲೊಶಿಪ್ ನೀಡುವ ಚಿಂತನೆ ಇದೆ. ವಿಶ್ವವಿದ್ಯಾಲಯದಲ್ಲಿ ಕಲಾ ಶಿಬಿರ ಆಯೋಜಿಸಲಾಗುವುದು, ಎಂದು ಹೇಳಿದರು.
ಮೊಡೆಪು ಸೇರಿದಂತೆ ಇಂತಹ ಕಲಾ ಸಾಂಸ್ಕೃತಿಕ ಕಾರ್ಯಗಳಿಗೆ ವಿಶ್ವಿವಿದ್ಯಾಲಯದ ಬೆಂಬಲ ಇದ್ದೇ ಇದೆ. ಎನ್.ಜಿ. ಪಾವಂಜೆ ಲಲಿತ ಕಲಾ ಪೀಠಕ್ಕೆ ಆರ್ಥಿಕ ಅಡಚಣೆ ಆಗದಂತೆ ನೋಡಿಕೊಳ್ಳಲಾಗುವುದು, ಎಂದವರು ಹೇಳಿದರು.
ಶಾಶ್ವತ ಚಿತ್ರಕಲಾ ಪ್ರದರ್ಶನ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಧುನಿಕ ಅಗಲಿದ ಕಲಾವಿದರ ಪರಿಚಯ ದಾಖಲೀಕರಣ ರಾಜ್ಯಕ್ಕೊಂದು ಮಹತ್ವದ ಕೊಡುಗೆಯಾಗಿದೆ. ಇಂತಹ ದಾಖಲೀಕರಣ ರಾಜ್ಯದ ಇತರೆಡೆಯು ನಡೆಯಬೇಕು ಎಂದು ಕೇಂದ್ರ ಲಲಿತ ಕಲಾ ಅಕಾಡಮಿಯ ಮಾಜಿ ಅಧ್ಯಕ್ಷ ಕಲಾ ಇತಿಹಾಸಕಾರ ಸಿ. ಎಸ್. ಕೃಷ್ಣ ಸೆಟ್ಟಿ ಹೇಳಿದರು. ಮಂಗಳೂರಿನಲ್ಲಿ ಅಗಲಿದ ಕಲಾವಿದರ ಶಾಶ್ವತ ಚಿತ್ರಕಾಲ ಪ್ರದರ್ಶನ ವ್ಯವಸ್ಥೆ ಆಗಬೇಕು. ಅಗಲಿದ ಕಲಾವಿದರು ಕೃತಿಗಳು ಮೂಲೆ ಸೇರುವ ಬದಲು ಜನರಿಗೆ ತಲುಪುವಂತಾಗಬೇಕು ಎಂದರು.
ಹಿಂದೆ ಲಲಿತ ಕಲಾ ಅಕಾಡಮಿ ಕೃತಿಗಳನ್ನು ಹೊರತರುವ ಸಾಂಪ್ರದಾಯ ಹೊಂದಿತ್ತು. ಲಲಿತ ಕಲಾ ಅಕಾಡಮಿ ಮಾಡಬೇಕಾದ ಕಾರ್ಯವನ್ನು ಮಾಡಿರುವ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದ ಕೃಷ್ಣ ಸೆಟ್ಟಿ ಅವರು, ಒಂದು ಕಾಲದಲ್ಲಿ ಮೈಸೂರು ವಿವಿ ಪ್ರಸಾರಾಂಗ ಕಡಿಮೆ ಬೆಲೆಗೆ ನಿರಂತರ ಕೃತಿಗಳನ್ನು ಹೊರತರುವ ಜತೆಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿದ್ದರು. ಇಂತಹ ಕಾರ್ಯವನ್ನು ಮಂಗಳೂರು ವಿವಿ ಸೇರಿದಂತೆ ರಾಜ್ಯಿಯದ ಎಲ್ಲ ವಿವಿಗಳು ನಡೆಸಬೇಕು ಎಂದರು.
ಈ ಕೃತಿಯನ್ನು ಹೊರತರುವುದು ತುಂಬಾ ಸವಾಲಿನ ಕೆಲಸವಾಗಿದ್ದರು ಕೂಡ, ಅಂತರಾಷ್ಟ್ರೀಯ ಗುಣಮಟ್ಟದ ಕೃತಿ ಹೊರಬಂದಿದೆ ಎಂದು ಹಿರಿಯ ಕಲಾವಿದ ಬಿ.ಗಣೇಶ್ ಸೋಮಯಾಜಿ ಹೇಳಿದರು. ಮೊಡೆಪು ಕೃತಿಯು ಅಗಲಿದ ಕಲಾವಿದರಿಗೆ ಅರ್ಪಣೆಯಾಗಿದೆ ಎಂದು ಕೃತಿಕಾರರಾದ ಡಾ.ಜನಾರ್ದನ ಹಾವಂಜೆ ಹೇಳಿದರು.
ಇಂತಹ ಪ್ರಯತ್ನಗಳನ್ನು ವೆಚ್ಚನಿಯಂತ್ರಣ ಮತ್ತು ಹೆಚ್ಚುಮಂದಿಗೆ ತಲುಪಲು ಸುಲಭವಾಗುವಂತೆ ಡಿಜಿಟಲೀಕರಣ ಮಾಡುವುದು ಸೂಕ್ತ ಎಂದು ಮಂಗಳೂರು ಟುಡೇ ಸಂಪಾದಕ ವಿ.ಯು ಜಾರ್ಜ್ ಸಲಹೆ ನೀಡಿದರು.
ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಮತ್ತು ಯೋಜನೆಯ ಸಲಹೆಗಾರರಾದ ಸುಭಾಶ್ಚಂದ್ರ ಬಸು ಅವರು ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ನೇಮಿರಾಜ ಶೆಟ್ಟಿ ಅವರು ವಂದಿಸಿದರು. ಶರ್ವಾನಿ ಭಟ್ ಅತಿಥಿಗಳನ್ನು ಪರಿಚಯಿಸಿದರು.
ಪ್ರದರ್ಶನವು 2022 ನವೆಂಬರ್ 20 ರಿಂದ 27 ರವರೆಗೆ ಉಡುಪಿಗೆ ಪ್ರಯಾಣಿಸಲಿದ್ದು, ಅಲ್ಲಿ ಉಡುಪಿಯ ಇಂಟಾಕ್ ಉಪ-ಚಾಪ್ಟರ್ ಮತ್ತು ಆರ್ಟಿಸ್ಟ್ಸ್ ಫೋರಮ್ ಆಶ್ರಯದಲ್ಲಿ ಕೆ.ಎಂ.ಮಾರ್ಗ್ ನ ಗ್ಯಾಲರಿ ದೃಷ್ಟಿಯಲ್ಲಿ (ಅಲಂಕಾರ್ ಥೇಟ್ರೆ ಹಿಂಭಾಗದಲ್ಲಿ) ಆಯೋಜಿಸಲಾಗಿದೆ.
34 ಕಲಾವಿದರ ಪಟ್ಟಿ:
ಈ ಕೆಳಗಿನ 34 ಕಲಾವಿದರ ಕೃತಿಗಳನ್ನು ದಸ್ತಾವೇಜಿನಲ್ಲಿ ಸೇರಿಸಲಾಗಿದೆ:
• ಗೋಪಾಲಕೃಷ್ಣ ಪಾವಂಜೆ (1866 – 1945)
• ಎನ್.ಜಿ. ಪಾವಂಜೆ (1892 – 1965)
• ಕೆ.ಶಿವರಾಮ ಕಾರಂತರು (1902-1997)
• ಸೈಮನ್ ಎಸ್. ರಾಸ್ಕಿನ್ಹಾ (1910 – 1987)
• ಕೆ.ಕೆ. ಹೆಬ್ಬಾರ್ (1911 – 1996)
• ಬಿ.ಪಿ. ಬಯಿರಿ (1912 – 1996)
• ಮಂಗೇಶ್ ಶಿರಾಲಿ (1917 – 2004)
• ಎಲ್.ಕೆ. ಶೆವ್ಗೂರ್ (1919 – 1966)
• ಬಿ.ಜಿ. ಮೊಹಮ್ಮದ್ (1920 – 2010)
• ಎಲ್.ಪಿ. ಅಂಚನ್ (1927 – 1997)
• ಜಿ.ಎಸ್. ಕೋಡಿಕಲ್ (1929 – 2019)
• ಎಲ್.ಜಿ. ಕಾಮತ್ (1931 – 1995)
• ಪದ್ಮರಾಜ್ (1931 -2012)
• ಚಂದ್ರಶೇಖರ್ (1933 – 2015)
• ಕಾಮೆಂಡ ಮುತ್ತಣ್ಣ (1935 – 2004)
• ಗಿರಿಜಾ ಯಾದವ್ (1935- 2004) • ಕಾ ವಾ ಆಚಾರ್ಯ (1937 – 2013)
• ಜಿ.ಎಸ್. ಶೆಣೈ (1938 – 1994)
• ಕೆ.ಪಿ. ಶೆಣೈ (1938 – 2017)
• ಪ್ರಮೀಳಾ ಚೋಳಯ್ಯ (1939 – 2002)
• ಪಾಂಡುರಂಗ ರಾವ್ (1940 – 2019)
• ಪಿ.ಪಿ. ಕಾರಂತ (1940-2011)
• ಕೆ.ಎಲ್. ಭಟ್ (1941 – 2020)
ಎಂ.ಆರ್. ಪಾವಂಜೆ (1942 – 2021)
• ಎನ್.ಎಸ್. ಭಟ್ (1944 – 2021)
• ಅಶೋಕ್ ಶಿರಾಲಿ (1945 – 2007)
• ಆರ್ಯ ಆಚಾರ್ಯ (1945 – 2016)
• ಸಂಜೀವ ಶೆಟ್ಟಿ (1945 – 2007)
• ರಾಮದಾಸ್ ಅಡ್ಯಂತಾಯ (1947 – 2019)
• ಕೆ.ವಿ.ರಾವ್ (1948 -2021)
• ಮೋಹನ್ ಸೋನಾ (1954 – 2020)
• ಮಿಲಿಂದ್ ನಾಯಕ್ (1954 – 2019)
• ಜಗದೀಶ್ ಅಮ್ಮುಂಜೆ (1955 – 2013)
• ಲಕ್ಷ್ಮಿನಾರಾಯಣ (1967 – 2003)