ಉಜಿರೆ: “ಇಂದು ನಮ್ಮ ಕರಾವಳಿ ಭಾಗದಲ್ಲಿ ದೇವಾಲಯಗಳ ಜೀರ್ಣೋದ್ಧಾರ ಭರಾಟೆಯಲ್ಲಿ ನೂತನ ಶೈಲಿಯ ಅಳವಡಿಕೆ ಮಧ್ಯೆ ಪ್ರಾಚೀನ ಮೂಲ ಶೈಲಿಯ ಪರಂಪರೆಯನ್ನು ಕಳಚಿಕೊಳ್ಳುತ್ತಿದ್ದೇವೆ” ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.
ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಇತಿಹಾಸ ವಿಭಾಗದ ವತಿಯಿಂದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಅಂಗವಾಗಿ ಆಯೋಜಿಸಲಾದ ‘ಸಪ್ತ ಚಾರಿತ್ರ’ ಕಾರ್ಯಕ್ರಮವನ್ನು ನ. 24ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಇತಿಹಾಸ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. ಅದು ನಿಂತ ನೀರಾಗಲು ಸಾಧ್ಯವಿಲ್ಲ. ಆದರೆ, ಪ್ರಾಚೀನ ಶಾಸನಗಳನ್ನು, ದಾಖಲೆಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಕರಾವಳಿ ಪ್ರದೇಶಕ್ಕೆ ತನ್ನದೇ ಆದ ಆಹಾರ ಪರಂಪರೆ, ನ್ಯಾಯ ಪರಂಪರೆ, ಧಾರ್ಮಿಕ ಪರಂಪರೆ ಎಂಬ ವಿಶಿಷ್ಟವಾದ ಇತಿಹಾಸವಿದೆ. ಮೂಲ ಪರಂಪರೆಯನ್ನು ಉಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
“ಕರಾವಳಿಯ ಯುವಜನತೆ ನಮ್ಮ ಪ್ರಾಚೀನ ಆಹಾರ ಪದ್ಧತಿಯನ್ನು ತೊರೆದು ಆಧುನಿಕ ಶೈಲಿಯತ್ತ ವಾಲುತ್ತಿರುವುದು ಶೋಚನೀಯ ಸಂಗತಿ” ಎಂದ ಅವರು, ಇತಿಹಾಸವನ್ನು ಉಳಿಸುವಲ್ಲಿ ‘ಸಪ್ತ ಚಾರಿತ್ರ’, ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಧ. ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಪ್ರಾಚೀನ ಕಾಲದ ಆದರ್ಶ, ಸಂದೇಶಗಳನ್ನು ಮಾದರಿಯಾಗಿಟ್ಟುಕೊಂಡು ಪ್ರಸ್ತುತ ಚರಿತ್ರೆಯನ್ನು ಅಧ್ಯಯನ ಮಾಡಬಹುದು ಎಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಗೌರವಿ ವಂದಿಸಿ, ಸೋನಾ ಕಾರ್ಯಕ್ರಮ ನಿರೂಪಿಸಿದರು.