ಉಜಿರೆ, ಸೆ.4: ಆಹಾರ ವಸ್ತುಗಳ ಕಲಬೆರಕೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವತಿಯಿಂದ ‘ಆಹಾರ ವಸ್ತುಗಳಲ್ಲಿರುವ ಕಲಬೆರಕೆ ಪತ್ತೆ ಹಚ್ಚುವಿಕೆ: ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ’ವು ಆ.31ರಂದು ನಡೆಯಿತು.
ಅಂತಿಮ ಬಿ.ಎಸ್.ಸಿ. ವಿದ್ಯಾರ್ಥಿಗಳು ಕಾಲೇಜಿನ ಪ್ರಯೋಗಾಲಯದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ಸಿಬಿಎಸ್ಸಿ) ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಆಹಾರ ಪದಾರ್ಥಗಳಲ್ಲಿರುವ ಕಲಬೆರಕೆಯನ್ನು ಸುಲಭವಾಗಿ ಪತ್ತೆ ಮಾಡುವ ಪರೀಕ್ಷೆಗಳನ್ನು ಮಾಡಿ ತೋರಿಸಿ ಮಾಹಿತಿ ಮತ್ತು ತರಬೇತಿ ನೀಡಿದರು.
ಹಾಲು, ಸಕ್ಕರೆ, ಬೆಲ್ಲ, ಜೇನುತುಪ್ಪ, ಅರಿಶಿನ ಹುಡಿ, ಅಕ್ಕಿಹಿಟ್ಟು, ಬೆಣ್ಣೆ, ತುಪ್ಪ, ತೆಂಗಿನೆಣ್ಣೆ ಮುಂತಾದ ನಿತ್ಯ ಬಳಕೆಯ ಆಹಾರ ಪದಾರ್ಥಗಳಲ್ಲಿರುವ ಕಲಬೆರಕೆಯನ್ನು ಪತ್ತೆ ಮಾಡಿ ತೋರಿಸಲಾಯಿತು.
ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಾಕುಮಾರಿ ಕೆ.ಪಿ. ಅವರು ಮಕ್ಕಳಿಗೆ ಕಾರ್ಯಾಗಾರದ ಪ್ರಾಮುಖ್ಯ ತಿಳಿಸಿದರು. “ವ್ಯಾಪಾರಿಗಳು, ಮಧ್ಯವರ್ತಿಗಳು ಹೆಚ್ಚು ಹಣ ಗಳಿಸುವ ದುರುದ್ದೇಶದಿಂದ ಕಲಬೆರಕೆ ಮಾಡುತ್ತಾರೆ. ಇದರಿಂದಾಗಿ ಜನಸಾಮಾನ್ಯರು ವಿವಿಧ ರೋಗ ರುಜಿನಗಳಿಗೆ ತುತ್ತಾಗುವುದನ್ನು ತಪ್ಪಿಸಲು ಈ ರೀತಿಯ ತರಬೇತಿ ಕಾರ್ಯಕ್ರಮ ಸಹಕಾರಿ” ಎಂದರು.
ವಿಭಾಗದ ಉಪನ್ಯಾಸಕಿ ಸಂಗೀತ ಬಿ. ಕಾರ್ಯಕ್ರಮ ಸಂಯೋಜಿಸಿದರು. ಉಪನ್ಯಾಸಕಿಯರಾದ ದಿವ್ಯ ಹಾಗೂ ಗಾನವಿ ಡಿ. ಸಹಕಾರ ನೀಡಿದರು.