ನಾವು ಒಂದು ದೇಶದ ಪ್ರಜ್ಞಾವಂತ ಪ್ರಜೆಗಳಾಗಿದ್ದೇವೆ. ನಾವು ಮೂಲಭೂತ ಹಕ್ಕುಗಳ ಬಗ್ಗೆ ತಿಳಿದಿರುವುದು ಎಷ್ಟು ಅಗತ್ಯವೋ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಹೊಂದಿರುವುದು ಅಷ್ಟೇ ಅಗತ್ಯ. ಈ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ನಮ್ಮ ಎರಡು ಕಣ್ಣುಗಳಿದ್ದಂತೆ. ಎರಡರಲ್ಲಿ ಒಂದಕ್ಕೆ ತೊಂದರೆ ಉಂಟಾದರೂ ಜೀವನದ ಸಮತೋಲನಕ್ಕೆ ಧಕ್ಕೆ ಉಂಟಾಗುತ್ತದೆ.
ಭಾರತ ಸಂವಿಧಾನ ಜಾರಿಗೊಂಡಾಗ ಮೂಲಭೂತ ಕರ್ತವ್ಯಗಳ ಬಗ್ಗೆ ಚರ್ಚೆಯಾಗಿತ್ತು. ಆದರೆ ಅದು ಜಾರಿಯಲ್ಲಿರಲಿಲ್ಲ. 51( ಎ ) ವಿಧಿಯ ಪ್ರಕಾರ 1976ರಲ್ಲಿ 42ನೇ ತಿದ್ದುಪಡಿ ಮಾಡುವ ಮೂಲಕ ಮೂಲಭೂತ ಕರ್ತವ್ಯಗಳನ್ನು ಸೇರ್ಪಡೆ ಮಾಡಲಾಯಿತು. ಆ ಹನ್ನೊಂದು ಮೂಲಭೂತ ಕರ್ತವ್ಯಗಳು ಯಾವವು ಅಂದರೆ :
ಪ್ರಜೆಗಳು ಸಂವಿಧಾನಕ್ಕೆ ಬದ್ಧರಾಗಿರಬೇಕು, ಅದರ ಮೌಲ್ಯಗಳನ್ನು ಮತ್ತು ಸಂಸ್ಥೆಗಳನ್ನು ಗೌರವಿಸಬೇಕು; ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ಸೂಚಿಸಬೇಕು; ಸ್ವಾತಂತ್ರ್ಯ ಹೋರಾಟದ ಉದಾತ್ತ ಆದರ್ಶಗಳನ್ನು ಅನುಸರಿಸಬೇಕು; ಧರ್ಮ, ಪ್ರದೇಶದಂತಹ ಗಡಿಗಳನ್ನು ಮೀರಿ ದೇಶವಾಸಿಗಳ ನಡುವೆ ಸೋದರತ್ವ ಹಾಗೂ ಸೌಹಾರ್ದ ಭಾವವನ್ನು ಬೆಳೆಸಬೇಕು; ಮಹಿಳೆಯರ ಘನತೆಗೆ ಕುಂದು ತರುವಂತಹ ಆಚರಣೆಗಳನ್ನು ತಿರಸ್ಕರಿಸಬೇಕು; ನಮ್ಮ ಬಹುಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಕಾಪಾಡಬೇಕು; ಅರಣ್ಯ, ನದಿ, ವನ್ಯಜೀವಿಗಳನ್ನು ರಕ್ಷಿಸಬೇಕು; ವೈಜ್ಞಾನಿಕ ಮನೋಭಾವ, ಮಾನವೀಯತೆ, ಸುಧಾರಣೆಯ ಧೋರಣೆ ಹಾಗೂ ಪ್ರಶ್ನಿಸುವ ಧೋರಣೆ ಬೆಳೆಸಿಕೊಳ್ಳಬೇಕು; ಹಿಂಸೆಯನ್ನು ತ್ಯಜಿಸಬೇಕು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು; ಹಾಗೂ 6 ರಿಂದ14 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂದು.
ಆದರೆ ಇಂದಿನ ದಿನಗಳಲ್ಲಿ ಎಲ್ಲರ ಗಮನ ಮೂಲಭೂತ ಹಕ್ಕುಗಳ ಕಡೆಯೇ ಇದೆ. ಮೂಲಭೂತ ಕರ್ತವ್ಯಗಳ ಮಾತು ಬಂದಾಗಲೆಲ್ಲ ದೇಶದ ನಾಗರಿಕರು ಅದರಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯದ ಮೊರೆ ಹೋಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬಹುದು. ಆದರೆ ಮೂಲಭೂತ ಕರ್ತವ್ಯಗಳ ಉಲ್ಲಂಘನೆ ಮಾಡುವುದರಿಂದ ಯಾವ ರೀತಿಯ ಶಿಕ್ಷೆಯನ್ನು ವಿಧಿಸಬೇಕು ಎಂಬುದರ ಬಗ್ಗೆ ಮಾಹಿತಿಯಿಲ್ಲ.
ಈ ‘ಕರ್ತವ್ಯ’ ಎಂಬ ಪದವೇ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂಬುದನ್ನು ಸೂಚಿಸುತ್ತದೆ. ಹಾಗಾಗಿ ಹಕ್ಕುಗಳನ್ನು ಚಲಾಯಿಸುವ ವ್ಯಕ್ತಿ ಕರ್ತವ್ಯ ಪಾಲನೆಗೂ ಬದ್ಧನಾಗಿರಬೇಕು. ತನ್ನ ಕರ್ತವ್ಯಗಳನ್ನು ಪಾಲಿಸದ ವ್ಯಕ್ತಿ ಹಕ್ಕುಗಳನ್ನು ಚಲಾಯಿಸಲು ಯೋಗ್ಯನಾಗಿರುವುದಿಲ್ಲ.
ನಮ್ಮ ಕರ್ತವ್ಯ ಎನ್ನುವುದು ನನ್ನ ಪ್ರಕಾರ ಮನೆಯಿಂದಲೇ ಆರಂಭವಾಗುವಂತದ್ದು. ನಾವು ಚಿಕ್ಕವರಿದ್ದಾಗಿಂದಲೂ ಒಂದಲ್ಲಾ ಒಂದು ಕಾರಣಕ್ಕಾಗಿ ಕರ್ತವ್ಯವನ್ನು ನಿಭಾಯಿಸುತ್ತಲೇ ಬಂದಿದ್ದೇವೆ. ಚಿಕ್ಕ ಮಗುವಿದ್ದಾಗ ಪಾಲಕರ ಮಾರ್ಗದಶದಲ್ಲಿ ಸಾಗುವ ಮೂಲಕ, ಶಾಲಾ ಕಾಲೇಜಿಗೆ ತೆರಳುವಾಗ ವಿದ್ಯಾರ್ಥಿಯಾಗಿ, ಮತಚಲಾಯಿಸುವಾಗ ದೇಶದ ಪ್ರಜ್ಞಾವಂತ ಪ್ರಜೆಯಾಗಿ, ವೃದ್ಧ ತಂದೆ ತಾಯಿಯರ ಆಸೆ ತೀರಿಸುವ ಮಗನಾಗಿ. ಹೀಗೆ ನಮ್ಮ ಜೀವನ ಪೂರ್ತಿ ಒಂದಲ್ಲಾ ಒಂದು ಕರ್ತವ್ಯದ ನಿರ್ವಹಣೆ ಆಗುತ್ತಲೇ ಇದೆ. ಅದೆ ರೀತಿ ಮೂಲಭೂತ ಕರ್ತವ್ಯ ಬಂದಾಗಲೂ ನಾವು ಅದನ್ನು ನಿಭಾಯಿಸಬೇಕು.
ಏಕೆಂದರೆ ಈ ಕರ್ತವ್ಯಗಳು ನಮ್ಮ ಸಮಾಜವನ್ನು ಬಲಿಷ್ಠವಾಗಿಸುತ್ತವೆ. ಇವುಗಳಿಗೆ ಬದ್ಧರಾಗಿ ನಡೆದುಕೊಂಡರೆ ನಮ್ಮಲ್ಲಿ ಸೋದರತ್ವ ಬೆಳೆಯುತ್ತದೆ, ದೇಶದ ಏಕತೆ ಗಟ್ಟಿಯಾಗುತ್ತದೆ. ಅಲ್ಲದೇ ನಮ್ಮದು ವಿಶ್ವದ ಬಹುದೊಡ್ಡ ಪ್ರಜಾತಂತ್ರ ಮಾತ್ರವೇ ಅಲ್ಲ; ವಿಶ್ವದ ಅತ್ಯಂತ ವೈವಿಧ್ಯಮಯ ಪ್ರಜಾತಂತ್ರವೂ ಆಗಿದೆ. ಹಾಗಾಗಿ ಇಲ್ಲಿನ ವೈವಿಧ್ಯತೆಗೆ ನಾವು ಗೌರವವನ್ನು ಸಲ್ಲಿಸಲೇಬೇಕು.
ನಾವು ಯಾವುದನ್ನೇ ಆದರೂ ಶಿಕ್ಷೆ, ದ್ವೇಷದಿಂದ ಗೆಲ್ಲಲು ಸಾಧ್ಯವಿಲ್ಲ. ಕರ್ತವ್ಯಗಳನ್ನೂ ಪಾಲಿಸಿಲ್ಲವೆಂದು ದ್ವೇಷಿಸಿದರೆ ಅಲ್ಲಿ ದ್ವೇಷವೇ ಮುಂದುವರೆದುಕೊಂಡು ಹೋಗುತ್ತದೆ. ಅದರ ಬದಲಾಗಿ ಕರ್ತವ್ಯದ ಬಗ್ಗೆ ಅರಿವಿಲ್ಲದೆ ಇರುವವರಿಗೆ, ಕರ್ತವ್ಯವನ್ನು ಪಾಲಿಸದೆ ಇರುವವರಿಗೆ ಕರ್ತವ್ಯದ ಬಗ್ಗೆ ಅರಿವು ಮೂಡಿಸಬೇಕು. ನಾವು ನಮ್ಮ ಕರ್ತವ್ಯವನ್ನು ಪ್ರೀತಿಸುತ್ತಾ ಸಾಗಬೇಕು. ಆಗ ಅದು ನಮ್ಮ ಜೀವನದ ಒಂದು ಭಾಗವಾಗುತ್ತದೆ. ಹಾಗಾಗಿ ಮೂಲಭೂತ ಹಕ್ಕುಗಳಿಗೆ ಕೂಡುವ ಆದ್ಯತೆಯನ್ನು ಮೂಲಭೂತ ಕರ್ತವ್ಯಗಳಿಗೂ ನೀಡೋಣ.
ಮಧುರಾ ಎಲ್ ಭಟ್ಟ
ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ