ಶಂಕರಘಟ್ಟ, ಮೇ. 20: ಇತ್ತೀಚಿನ ದಿನಗಳಲ್ಲಿ ಕೋವಿಡ್, ಹೃದ್ರೋಗ, ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿವೆ. ಇವುಗಳಿಗೆ ಲಸಿಕೆ ಕಂಡುಹಿಡಿಯಲು ಮೂಲವಿಜ್ಞಾನದಿಂದ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ ಸಲಹೆಯಿತ್ತರು.
ಕುವೆಂಪು ವಿವಿಯ ಔದ್ಯೋಗಿಕ ರಸಾಯನವಿಜ್ಞಾನ ವಿಭಾಗದಿಂದ ವಿವಿಯ ಬಸವ ಸಭಾಭವನದಲ್ಲಿ ‘ರಸಾಯನವಿಜ್ಞಾನ ಮತ್ತು ಜೀವವಿಜ್ಞಾನದಿಂದ ಸಮಾಜ ಮತ್ತು ಉದ್ಯಮ ಮೇಲೆ ಆಗಿರುವ ಪರಿಣಾಮಗಳು’ ವಿಷಯ ಕುರಿತು ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತೀರೋಗವು ದೇಹದ ಒಂದೊಂದು ಭಾಗಕ್ಕೆ ಹಾನಿಮಾಡಿ ಜೀವಹಾನಿಕಾರಕವಾಗಿವೆ. ಹಿಂದೆ ಔಷಧಿ ಸಂಶೋಧಿಸಲು ಎಲ್ಲ ವಿಜ್ಞಾನರಂಗಗಳು ತಮ್ಮ ವ್ಯಾಪ್ತಿಯಲ್ಲಿಯೇ ಪ್ರಯತ್ನಿಸುತ್ತಿದ್ದವು. ಪ್ರಸ್ತುತ ದಿನಗಳಲ್ಲಿ ಅಂತರ್ಶಿಸ್ತೀಯ ಅಧ್ಯಯನ ಮತ್ತು ಸಂಶೋಧನೆಗಳಿಗೆ ಅತಿ ಮಹತ್ವಿವಿದೆ. ಅವುಗಳಿಂದ ಮಾತ್ರವೇ ಲಸಿಕೆ, ಔಷಧೋತ್ಪನ್ನಗಳ ಆವಿಷ್ಕಾರ ಸಾಧ್ಯವಾಗುತ್ತಿದೆ ಎಂದರು.
ರಸಾಯನವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳು ಇಂದು ಬೇರೆಬೇರೆ ವಿಷಯ, ವಿಭಾಗಗಳಾಗಿ ಉಳಿದಿಲ್ಲ. ಸಂಯುಕ್ತ ಪರಿಶ್ರಮದಿಂದ ಸಂಶೋಧನೆಕೈಗೊಂಡಲ್ಲಿ ಜೀವಮಾರಕ ರೋಗಗಳಿಗೆ ಔಷಧಿ ಆವಿಷ್ಕಾರ ಸಾಧ್ಯವಾಗಿದೆ ಮತ್ತು ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುವೆಂಪು ವಿವಿಯಲ್ಲಿ ಅಂತರ್ಶಿಸ್ತೀಯ ಅಧ್ಯಯನ ಮತ್ತು ಸಂಶೋಧನೆಗೆ ವಿಶೇಷ ಒತ್ತು ನೀಡಲಾಗಿದ್ದು, ಸಂಶೋಧನಾರ್ಥಿಗಳಿಗೆ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಮಲೆನಾಡು ಸೇರಿದಂತೆ ಸ್ಥಳೀಯವಾಗಿ ಭಾದೆನೀಡುತ್ತಿರುವ ರೋಗಗಳಿಗೆ ಔಷಧಿ, ಲಸಿಕೆ ಅಭಿವೃದ್ಧಿಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಕುಲಸಚಿವೆ ಅನುರಾಧ ಜಿ. ಮಾತನಾಡಿ, ಮೂಲವಿಜ್ಞಾನ ವಿಭಾಗಗಳಲ್ಲಿನ ಸಂಶೋಧನೆಗಳನ್ನು ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿಯೂ ವಿವಿಯು ಪ್ರೋತ್ಸಾಹಿಸಿತ್ತು. ಸಂಶೋಧನೆಗಳು ಇಂತಹ ನಿರಂತರತೆ ಬೇಡುತ್ತವೆ. ಇದುವೇರಾಜ್ಯ, ರಾಷ್ಟ್ರಮಟ್ಟದಲ್ಲಿ ವಿವಿಯ ಪ್ರಾಧ್ಯಾಪಕರುಗಳು ತಮ್ಮ ಸಮಾಜಪರ ಸಂಶೋಧನೆಗಳಿಂದ ಬೌದ್ಧಿಕ ವಲಯದಲ್ಲಿ ಖ್ಯಾತಿ, ಪ್ರಶಸ್ತಿ ಗಳಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಭಾಗದ ಅಧ್ಯಾಪಕರುಗಳಾದ ಪ್ರೊ.ಕೆ.ವಸಂತ್ ಕುಮಾರ್ ಪೈ, ಪ್ರೊ.ಹೆಚ್.ಎಸ್.ಭೋಜ್ಯಾನಾಯ್ಕ್, ಪ್ರೊ.ಬಿ.ಈ.ಕುಮಾರಸ್ವಾಮಿ, ಡಾ.ಇಟ್ಟೆ ಪುಷ್ಪವತಿ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಜರಿದ್ದರು.