ಶಂಕರಘಟ್ಟ, ಜ. 31 : ಸರ್ಕಾರಿ ನೌಕರರು ತಮ್ಮ ಎರಡು-ಮೂರು ದಶಕಗಳ ಕಾಲಾವಧಿಯಲ್ಲಿ ನಿಷ್ಠೆ ಮತ್ತು ಸಮಯಪಾಲನೆಯ ಜೊತೆಗೆ ನಿವೃತ್ತಿಯಾದಲ್ಲಿ ಅದು ಅತ್ಯಂತ ಶ್ಲಾಘನೀಯವಾದ ವಿಚಾರ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ವಿವಿಯ ಅಧ್ಯಾಪಕೇತರ ನೌಕರರ ಸಂಘದ ವತಿಯಿಂದ ವಯೋನಿವೃತ್ತಿ ಪಡೆದ ವಿಜಯ್ ಕುಮಾರ್ ಎನ್. ಕೆ. ಅವರಿಗೆ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ನೌಕರರು ತಮಗೆ ದೊರೆಯುವ ಕಾಲಾವಧಿಯಲ್ಲಿ ಸರ್ಕಾರಿ ಕೆಲಸವನ್ನು ದೇವರ ಕೆಲಸವೆಂಬಂತೆಪರಿಗಣಿಸಿ, ಎಲ್ಲ ಸಹನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ದಿನಗಳು ಉರುಳಿದಂತೆ ಹೊಸ ಆಡಳಿತ ವ್ಯವಸ್ಥೆಯ ಅಗತ್ಯಗಳನ್ನು ಅರಿತು, ಕಲಿತು ತಮ್ಮನ್ನು ಸಕ್ರಿಯವಾಗಿ ಸೇವೆಯಲ್ಲಿ ತೊಡಗಿಸಿಕೊಂಡು ಸಂಸ್ಥೆಯ ಏಳ್ಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುಬೇಕು. ಅಂತಹವರೇ ಸಂಸ್ಥೆಗಳಿಗೆ ಆಸ್ತಿಯಾಗುತ್ತರೆ. ವಿಜಯ್ಕುಮಾರ್ ಅಂತಹದೇ ನಿಷ್ಠಾವಂತ, ಸಮಯಪಾಲಕ, ಚುರುಕು ವ್ಯಕ್ತಿತ್ವದ ಸಂವೇದನಾಶೀಲ ನೌಕರ ಎಂದು ಶ್ಲಾಘನೀಯ ನುಡಿಗಳನ್ನು ಆಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ವಿಜಯಕುಮಾರ್, ನಾಡ್ಣುಡಿಯಂತೆ ಮಕ್ಕಳಿಗಾಗಿ ಆಸ್ತಿ ಮಾಡುವ ಅಗತ್ಯವಿರುವುದಿಲ್ಲ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವೆಂಬ ಆಸ್ತಿಯಷ್ಟೇ ನೀಡಿದರೆ ಸಾಕು. ಕುವೆಂಪು ವಿವಿಯಲ್ಲಿ ಸೇವೆ ಸಲ್ಲಿಸಿದ ತೃಪ್ತಿಯಿದೆ ಮತ್ತು ವಿವಿಯಿಂದಾಗಿ ಸಮಾಜದಲ್ಲಿ ಗೌರವ ಹೆಚ್ಚಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ್, ಅಧ್ಯಾಪಕೇತರ ನೌಕರರ ಸಂಘದ ಶ್ರೀನಿವಾಸ್, ಅಲಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಜರಿದ್ದರು.