ಮೂಡುಬಿದಿರೆ: ವಿದ್ಯಾರ್ಥಿಗಳ ಯೋಚನೆಗಳು ಪರಿಸರ ಸಂರಕ್ಷಣೆಯತ್ತ ಇರಲಿ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.
ಕರ್ನಾಟಕ ಅರಣ್ಯ ಇಲಾಖೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ಹಾಗೂ ಕುದೆರಮುಖ ವನ್ಯಜೀವಿ ಘಟಕದ ಸಹಯೋಗದಲ್ಲಿ ವಿದ್ಯಾಗಿರಿಯ ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ನಡೆದ ‘ಗ್ರೀನ್ ಪಾರ್ಲಿಮೆಂಟ್ -2021’ ಅಣಕು ಸಂಸತ್ತಿನ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶೈಕ್ಷಣಿಕ ವಿಚಾರಗಳಿಗೆ ಒತ್ತು ನೀಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಕಡಿಮೆಯಾಗಿದೆ. ಜನರ ದುರಾಸೆಯ ಸ್ವಭಾವದಿಂದ ಹೆಕ್ಟೇರ್ ಗಟ್ಟಲೆ ಅರಣ್ಯ ಪ್ರದೇಶ ಶೋಷಣೆಗೊಳಗಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ನೀತಿಗಳ ತಿಳುವಳಿಕೆ ವಿದ್ಯಾರ್ಥಿಗಳಲ್ಲಿ ಮೂಡಿಸಲು ಗ್ರೀನ್ ಪಾರ್ಲಿಮೆಂಟ್ ಕಾರ್ಯಕ್ರಮ ಬಹಳ ಅಗತ್ಯ ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಕಾಶ್ ನೆತಾಲ್ಕರ್ ಮಾತನಾಡಿ, ಅರಣ್ಯ ನೀತಿ ಹಾಗೂ ಪರಿಸರ ಸೂಕ್ಶ್ಮ ಪ್ರದೇಶಗಳ ಅರಿವು ವಿದ್ಯಾರ್ಥಿಗಳಿಗೆ ಅಗತ್ಯ. ವನ್ಯಜೀವಿ ಸಂರಕ್ಷಣೆಯ ಹೊಣೆಗಾರಿಯೂ ಪ್ರತಿಯೊಬ್ಬರಲ್ಲಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಸಂಸತ್ತಿನಲ್ಲಿ ವಿರೋಧ ಮಾಡಬೇಕಾದನ್ನು ಸಮರ್ಥವಾಗಿ ವಿರೋಧಿಸಿ, ಉತ್ತಮ ವಿಚಾರಗಳಿಗೆ ಶಕ್ತಿ ತುಂಬಿ ಮಾತನಾಡಬೇಕು. ಆರೋಗ್ಯಪೂರ್ಣ ಚರ್ಚೆಯಿಂದ ಸಮಾಜಕ್ಕೆ ಹಾಗೂ ಪರಿಸರಕ್ಕೆ ಒಳಿತಾಗುತ್ತದೆ. ‘ಡೀಮ್ಡ್ ಫಾರೆಸ್ಟ್ ‘ ಎಂದು ಪರಿಗಣಿಸಲಾಗುವ ಪ್ರದೇಶದಲ್ಲಿ ಎಷ್ಟರ ಮಟ್ಟಿಗೆ ಅರಣ್ಯ ಸಂಪತ್ತಿನ ಸಂರಕ್ಷಣೆಯಾಗಿದೆ ಎಂಬುದರ ಪ್ರಾಯೋಗಿಕ ಅಧ್ಯಯನ ಆಗಬೇಕು ಎಂದರು.
ಉದ್ಘಾಟನಾ ಸಮಾರಂಭದ ಬಳಿಕ ಸ್ಪೀಕರ್ ಸಾತ್ವಿಕ್ ಅವರ ನಿರ್ದೇಶನದಲ್ಲಿ ಅಣಕು ಸಂಸತ್ತು ಅಧಿವೇಶನ ನಡೆಯಿತು. ಸಂಸತ್ತಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಅರಣ್ಯ ನೀತಿಯ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಡೆಪ್ಯುಟಿ ಅರಣ್ಯ ಸಂರಕ್ಷಣಾಧಿಕಾರಿ ಪಿ. ರುತ್ರನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.