ಬೆಂಗಳೂರು: ಬಂಗಾಳ ಫಲಿತಾಂಶದಿಂದ ಬಾಂಗ್ಲಾ, ಪಾಕಿಸ್ತಾನಕ್ಕೆ ಆಘಾತವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಇಂದು ಸುದಿನ. ಪ್ರಮುಖವಾಗಿ ಪಶ್ಚಿಮ ಬಂಗಾಳ ಚುನಾವಣೆ ದೇಶದ ಗಮನ ಸೆಳೆಯುತ್ತಿದೆ. ಅಸ್ಸಾಂ, ಪುದುಚೇರಿ ಮತ್ತು ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬಹುಮತ ಬರುತ್ತಿದೆ. ಪರಿಣಾಮ ಡಿಎಂಕೆ ಹತಾಶ ಮನೋಭಾವದಲ್ಲಿ ಗೂಡು ಸೇರಿದ್ದಾರೆ ಎಂದು ಕುಟುಕಿದರು.

ಮೋದಿ ಮೂರು ಬಾರಿ ಪ್ರಧಾನಿ ಆಗಿದ್ದಾರೆ. ಬಿಜೆಪಿ ದೊಡ್ಡ ಅಲೆ ದೇಶದಲ್ಲಿದೆ ಅನ್ನೋದು ಸಾಬೀತಾಗಿದೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ ಎಂದು ಟಾಂಗ್ ಕೊಟ್ಟರು. ಮಮತಾ ಬ್ಯಾನರ್ಜಿ ಅವರು ದೇಶದ್ರೋಹಿಗಳಿಗೆ ಬಾಗಿಲು ತೆರೆದುಕೊಟ್ಟಿದ್ದರು. ಆದರೆ ಇಂದಿನ ಫಲಿತಾಂಶ ದೇಶದ ಭದ್ರತೆಗೆ ಸುವರ್ಣ ಹಾದಿ ಮಾಡಿಕೊಟ್ಟಿದೆ. ಕೇರಳದಲ್ಲಿ ಬಿಜೆಪಿ ತನ್ನ ಖಾತೆ ಪ್ರಾರಂಭ ಮಾಡಲಿದೆ. ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಸಾಧಿಸಿರುವ ಮುನ್ನಡೆ ಪ್ರಮುಖವಾಗಿದೆ ಎಂದರು.

ಬಾಗಲಕೋಟೆ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಮತ್ತು ರೌಡಿಸಂ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ರೆಸಾರ್ಟ್‌ಗಳಲ್ಲಿ ಹಣ ಹಂಚಿರುವ ದಾಖಲೆ ಸಂಗ್ರಹಿಸ್ತಿದ್ದೇವೆ ಎಂದು ಅಶೋಕ್ ದೂರಿದರು. ಕಾಂಗ್ರೆಸ್ ಪಕ್ಷವು ಮುಸ್ಲಿಮರ ಬೆನ್ನಿಗೆ ಚೂರಿ ಹಾಕಿದೆ. ಮುಸ್ಲಿಂ ಸಮುದಾಯವು ಈಗ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ ಬಾರಿಸಿದೆ ಎಂದರು.