ಉತ್ತರ ಪ್ರದೇಶ: ತಂಗಿಗೆ ಉಡುಗೊರೆ ನೀಡಿದ ವಿಚಾರವಾಗಿ ಪತಿಯನ್ನು ಪತ್ನಿ ಸೇರಿ ಆಕೆಯ ಮನೆಯವರು ಕೊಂದ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಬೆಳಕಿಗೆ ಬಂದಿದೆ.
ಸಾವನ್ನಪ್ಪಿದ ವ್ಯಕ್ತಿಯನ್ನು ಚಂದ್ರ ಪ್ರಕಾಶ್ ಮಿಶ್ರಾ ಎಂದು ಗುರುತಿಸಲಾಗಿದೆ.
ಸ್ವಂತ ತಂಗಿಯ ವಿವಾಹದಂದು ಚಂದ್ರ ಪ್ರಕಾಶ್ ಮಿಶ್ರಾ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ್ದನು. ತಂಗಿಗೆ ಉಡುಗೊರೆ ನೀಡಿದ ಗಂಡನನ್ನು ಕಂಡು ಪತ್ನಿ ಚಾಬಿ ಕೋಪಿಸಿಕೊಂಡಿದ್ದಳು. ಇದೇ ವಿಚಾರಕ್ಕೆ ಜಗಳ ಕೂಡ ನಡೆದಿತ್ತು. ಕೊನೆಗೆ ಪತ್ನಿ ಚಾಬಿ ತನ್ನ ಸಹೋದರ ಬಳಿ ಗಿಫ್ಟ್ ಕೊಟ್ಟ ವಿಚಾರ ಹೇಳಿದ್ದಾಳೆ.
ಇದೇ ವಿಚಾರವಾಗಿ ಚಾಬಿ ಸಹೋದರನ ಬಳಿ ಚಂದ್ರ ಪ್ರಕಾಶ್ ಮಿಶ್ರಾನನ್ನು ದೂರಿದ್ದಲ್ಲದೆ, ಸರಿಯಾಗಿ ಪಾಠ ಕಲಿಸಿ ಎಂದು ಹೇಳಿದ್ದಾರೆ.
ಅದರಂತೆಯೇ ಪತ್ನಿಯ ಸಹೋದರ ಚಂದ್ರ ಪ್ರಕಾಶ್ ಮಿಶ್ರಾಗೆ ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ಚಂದ್ರ ಪ್ರಕಾಶ್ ಮಿಶ್ರಾ ಸಂಪೂರ್ಣ ಗಾಯಗೊಂಡು ಆಸ್ಪತ್ರೆ ಸೇರಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.
ಈ ಪ್ರಕರಣ ಸಂಬಂಧ ಪತ್ನಿ ಚಾಬಿ, ಸಹೋದರ ಸೇರಿದಂತೆ ಐವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.