ಪಾಕಿಸ್ತಾನ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಿದ ರ್ಯಾಲಿಯಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ವಜೀರಾಬಾದ್ನಲ್ಲಿ ನಡೆಯುತ್ತಿದ್ದ ನೈಜ ಸ್ವಾತಂತ್ರ್ಯ ರ್ಯಾಲಿಯಲ್ಲಿ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಇಮ್ರಾನ್ ಖಾನ್ ಕಾಲಿಗೆ ಗಾಯವಾಗಿದೆ.
ಇಮ್ರಾನ್ ಖಾನ್ ಅವರು ರ್ಯಾಲಿಯ ವೇಳೆ ತೆರೆದ ಕಂಟೇನರ್ನಲ್ಲಿ ಪ್ರಯಾಣಿಸುತ್ತಿದ್ದರು. ಗುಂಡಿನ ದಾಳಿ ನಡೆದ ಬಳಿಕ ಅವರನ್ನು ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಲಾಯಿತು. ಇಮ್ರಾನ್ ಖಾನ್ ಅವರ ಸಹಾಯಕ ಪಿಟಿಐ ಮುಖಂಡ ಫೈಸಲ್ ಜಾವೇದ್ ಕೂಡಾ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಳಿಕ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಇಮ್ರಾನ್ ಖಾನ್ನ ಬೆಂಬಲಿಗರೊಬ್ಬರು ಆತನನ್ನು ದಾಳಿ ನಡೆಸದಂತೆ ತಡೆದಿದ್ದಾರೆ. ಆತ ಎಕೆ-47 ನಿಂದ ಗುಂಡು ಹಾರಿಸಿದ್ದು, ಇದು ಉದ್ದೇಶಿತ ದಾಳಿ ಎಂದು ಪಿಟಿಐ ಮುಖಂಡ ಫವಾದ್ ಚೌಧರಿ ಹೇಳಿದ್ದಾರೆ.
ಆರೋಪಿಯ ಬಂಧನ:
ಜನರನ್ನು ದಾರಿತಪ್ಪಿಸುತ್ತಿರುವ ಕಾರಣಕ್ಕಾಗಿ ನಾನು ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಕೊಲೆ ಮಾಡಲು ಗುಂಡುಹಾರಿಸಿದ್ದೇನೆ ಎಂದು ಬಂಧಿತ ಬಂದೂಕುಧಾರಿ ಆರೋಪಿ ಪೊಲೀಸರಿಗೆ ಹೇಳಿದ್ದಾನೆ.
ಪಾಕಿಸ್ತಾನದ ಪಂಜಾಬ್ನಲ್ಲಿ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದ ವೇಳೆ ಬಂದೂಕುಧಾರಿಯೊಬ್ಬ ಇಮ್ರಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದ. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ, ನಾನು ಇಮ್ರಾನ್ ಖಾನ್ರನ್ನು ಕೊಲ್ಲಲೆಂದು ಬಂದಿದ್ದೆ. ಇಮ್ರಾನ್ ಖಾನ್ ಪಾಕಿಸ್ತಾನದ ಜನರರನ್ನು ದಾರಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಇಮ್ರಾನ್ ಖಾನ್ರನ್ನು ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ್ದೇನೆ. ನಾನು ಒಬ್ಬನೇ ಬಂದಿದ್ದೇನೆ. ನನ್ನ ಹಿಂದೆ ಯಾರು ಇಲ್ಲ ಎಂದಿದ್ದಾನೆ.
ಇಂದು ಜಫರಾಲಿ ಖಾನ್ ಚೌಕ್ನಲ್ಲಿ ಘಟನೆ ನಡೆದಿದ್ದು, ಇಮ್ರಾನ್ ಖಾನ್ ಅವರ ಕಾಲಿಗೆ ಗಾಯಗಳಾಗಿವೆ. ದುಷ್ಕರ್ಮಿ 3-4 ಬಾರಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಇಮ್ರಾನ್ ಖಾನ್ ಅವರ ಸಹಾಯಕ ಸೇರಿದಂತೆ ಒಟ್ಟು 15 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಒಬ್ಬಾತ ಮೃತಪಟ್ಟಿರುವುದಾಗಿ ವರದಿಯಾಗಿದೆ.