ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಹಿಂದು ದೇವಾಲಯಗಳ ಮೇಲೆ ಸರಣಿ ದಾಳಿ ಮುಂದುವರಿದಿದೆ. ಶನಿವಾರ ಬ್ರಿಸ್ಬೇನ್ನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಖಾಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿ ಹಾನಿ ಮಾಡಿದ್ದಾರೆ.
ದೇವಾಲಯದ ಅಧ್ಯಕ್ಷ ಸತೀಂದರ್ ಶುಕ್ಲಾ ಆಸ್ಟ್ರೇಲಿಯಾ ಟುಡೇಗೆ ಘಟನೆ ಕುರಿತು ವಿವರಿಸಿದ್ದು, “ಇಂದು ಬೆಳಿಗ್ಗೆ ಅರ್ಚಕರು ಮತ್ತು ಭಕ್ತರು ಕರೆ ಮಾಡಿ ನಮ್ಮ ದೇವಾಲಯದ ಕಾಂಪೌಂಡ್ ನಾಶ ಮಾಡಿರುವುದನ್ನು ತಿಳಿಸಿದರು. ನಾವು ಈ ಬಗ್ಗೆ ಕ್ವೀನ್ಸ್ಲ್ಯಾಂಡ್ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಪೊಲೀಸರು ದೇವಾಲಯ ಮತ್ತು ಭಕ್ತರ ಸುರಕ್ಷತೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಫೆಬ್ರವರಿ 22 ರಂದು ಬ್ರಿಸ್ಬೇನ್ನಲ್ಲಿರುವ ಭಾರತೀಯ ದೂತಾವಾಸವನ್ನು ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿದ ನಂತರ ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.
2023 ರಿಂದ ಈಚೆಗೆ ಆಸ್ಟ್ರೇಲಿಯಾದ ಹಿಂದೂ ದೇವಾಲಯಗಳು ಮೇಲೆ ಭಾರತ ವಿರೋಧಿ ಘೋಷಣೆಗಳು ಮತ್ತು ಗೀಚು ಬರಹಗಳೊಂದಿಗೆ ಗೋಡೆಗಳನ್ನು ವಿರೂಪಗೊಳಿಸುತ್ತಿರುವ ಘಟನೆಗಳು ಹೆಚ್ಚಿದ್ದು, ಖಲಿಸ್ತಾನ ಬೆಂಬಲಿಗರ ದಾಳಿ ಹೆಚ್ಚಿದೆ. ಕಳೆದ ತಿಂಗಳು, ಬ್ರಿಸ್ಬೇನ್ನ ಗಾಯತ್ರಿ ಮಂದಿರಕ್ಕೆ ಪಾಕಿಸ್ತಾನ ಮೂಲದ ಖಲಿಸ್ತಾನ್ ಉಗ್ರಗಾಮಿಗಳಿಂದ ಬೆದರಿಕೆ ಕರೆಗಳು ಬಂದಿತ್ತು. ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯನ್ನು ಬೆಂಬಲಿಸುವಂತೆ ಹಿಂದೂ ಸಮುದಾಯವನ್ನು ಕೇಳಿಕೊಳ್ಳಲಾಗಿತ್ತು. “ಖಾಲಿಸ್ತಾನ್ ಬೆಂಬಲಿಗರು ಆಸ್ಟ್ರೇಲಿಯನ್ ಹಿಂದೂ ಸಮುದಾಯವನ್ನು ಭಯಭೀತಗೊಳಿಸುತ್ತಿದ್ದಾರೆ. ನಮ್ಮ ಧರ್ಮವನ್ನು ಆಚರಿಸಲು ಮತ್ತು ದೇವಾಲಯಗಳಿಗೆ ಭೇಟಿ ನೀಡುವುದಕ್ಕೆ ಹಿಂಜರಿಯುವಂತೆ ಮಾಡುವುದು ಅವರ ಉದ್ದೇಶ ಎಂದು ಬ್ರಿಸ್ಬೇನ್ ನಿವಾಸಿಯೊಬ್ಬರು ಆಸ್ಟ್ರೇಲಿಯಾ ಟುಡೆಗೆ ತಿಳಿಸಿದರು.
ಘಟನೆಯನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮಿಷನ್ ಖಂಡಿಸಿದೆ.