ಕೊಲಂಬೊ: ದೇಶದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜನಾಕ್ರೋಶಕ್ಕೆ ಮಣಿದಿರುವ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಪ್ರಧಾನಿ ಸ್ಥಾನದಿಂದ ತನ್ನ ಅಣ್ಣ ಮಹಿಂದಾ ರಾಜಪಕ್ಸ ಅವರ ಪದಚ್ಯುತಿಗೆ ಒಪ್ಪಿದ್ದಾರೆ.
ಪ್ರಧಾನಿ ಸ್ಥಾನಕ್ಕೆ ಹೊಸ ಅಭ್ಯರ್ಥಿ ಹಾಗೂ ಸರ್ವಪಕ್ಷಗಳ ಸದಸ್ಯರನ್ನು ಒಳಗೊಂಡ ಹೊಸ ಸಂಪುಟದ ಆಯ್ಕೆಗಾಗಿ ರಾಷ್ಟ್ರೀಯ ಸಮಿತಿಯನ್ನು ರಚಿಸಲೂ ತೀರ್ಮಾನಿಸಿದ್ದಾರೆ.
ಅಧ್ಯಕ್ಷರ ಜೊತೆಗಿನ ಸಭೆಯ ನಂತರ ಸಂಸದ ಮೈತ್ರಿಪಾಲ ಸಿರಿಸೇನಾ ಅವರು ಈ ವಿಷಯ ತಿಳಿಸಿದರು. ಸಿರಿಸೇನಾ ಅವರು ರಾಜಪಕ್ಸಗೂ ಮೊದಲು ಶ್ರೀಲಂಕಾದ ಅಧ್ಯಕ್ಷರಾಗಿದ್ದರು.
ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾದ ಸರ್ಕಾರ, ಬಾಕಿ ಇರುವ ವಿದೇಶಿ ಸಾಲ ಪಾವತಿಸದೇ ಅಮಾನತ್ತಿನಲ್ಲಿಡಲು ನಿರ್ಧರಿಸಿದೆ. ವಿದೇಶಿ ಸಾಲದ ಮೊತ್ತ ಹೆಚ್ಚಿರುವುದು ಆಮದು ವಹಿವಾಟಿನ ಮೇಲೂ ಪರಿಣಾಮ ಬೀರಿದ್ದು, ಜನತೆ ಆಹಾರ ಪದಾರ್ಥಗಳು, ಇಂಧನ, ಅಡುಗೆ ಅನಿಲ, ಔಷಧಗಳಿಗೆ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ಅಧ್ಯಕ್ಷ ಗೋಟಬಯ, ಪ್ರಧಾನಿ ಮಹಿಂದಾ ಒಳಗೊಂಡಂತೆ ರಾಜಪಕ್ಸ ಕುಟುಂಬವು ಶ್ರೀಲಂಕಾದ ರಾಜಕಾರಣದಲ್ಲಿ ಕಳೆದ 20 ವರ್ಷಗಳಿಂದ ಪ್ರಾಬಲ್ಯ ಹೊಂದಿದೆ. ಈ ಕುಟುಂಬದ ವಿರುದ್ಧ ಈಗ ಜನಾಕ್ರೋಶ ವ್ಯಕ್ತವಾಗಿದೆ. ಅಧ್ಯಕ್ಷ ಮತ್ತು ಪ್ರಧಾನಿ ನಿವಾಸದ ಎದುರು ಹಲವು ದಿನಗಳಿಂದ ಜನರು ಭಾರಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.