ವಾಷಿಂಗ್ಟನ್: ನಿಜ್ಜರ್ ಹತ್ಯೆ ಕುರಿತು ಕನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆ ಎಂದು ಹೇಳಿಕೆ ನೀಡಿದ ಬಳಿಕ ಭಾರತ ಕೆನಡಾ ಸಂಬಂಧ ತೀವ್ರ ಹದಗೆಟ್ಟಿದೆ. ಈ ನಡುವೆ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಸಂಬಂಧ ಕೆನಡಾ ನಡೆಸುತ್ತಿರುವ ತನಿಖೆಗೆ ಸಹಕರಿಸುವಂತೆ ಅಮೆರಿಕ ಮತ್ತೆ ಭಾರತಕ್ಕೆ ಒತ್ತಾಯ ಮಾಡಿದೆ. ಹಾಲಿ ಅಮೆರಿಕ ಭೇಟಿ ಕೈಗೊಂಡಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್ ಈ ಒತ್ತಾಯ ಮಾಡಿದ್ದಾರೆ. ಆದರೆ ಜೈಶಂಕರ್ ಅವರು, ಕೆನಡಾ ಉಗ್ರರ ಪೋಷಣೆ ಮಾಡುತ್ತಿದೆ ಎಂದು ಬ್ಲಿಂಕನ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.
ಉಭಯ ದೇಶಗಳ ವಿದೇಶಾಂಗ ಸಚಿವರ ಭೇಟಿ ಬಳಿಕ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ಕೆನಡಾ ವಿಷಯ ಪ್ರಸ್ತಾಪಿಸಿದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಆದರೂ ಅನೌಪಚಾರಿಕವಾಗಿ ಜೈಶಂಕರ್ ಹಾಗೂ ಬ್ಲಿಂಕನ್ ನಡುವೆ ಚರ್ಚೆ ನಡೆದಿದೆ. ಖುದ್ದು ಜೈಶಂಕರ್ ಹಾಗೂ ಅಮೆರಿಕ ಸರ್ಕಾರದ ಮೂಲಗಳು ಇದನ್ನು ಖಚಿತಪಡಿಸಿವೆ.
ಈ ಬಗ್ಗೆ ಜೈಶಂಕರ್ ಶುಕ್ರವಾರ ಸಂಜೆ ಮಾಹಿತಿ ನೀಡಿ, ‘ಭಾರತ-ಕೆನಡಾ ಸಂಬಂಧದ ಬಗ್ಗೆ ಚರ್ಚಿಸಿದೆವು. ಈ ವೇಳೆ ಕೆನಡಾದಲ್ಲಿ ನಡೆದ ಖಲಿಸ್ತಾನಿ ಚಟುವಟಿಕೆಗಳ ಬಗ್ಗೆ ನಾನು ಬ್ಲಿಂಕನ್ಗೆ ಮಾಹಿತಿ ನೀಡಿದೆ. ಅಲ್ಲದೆ, ಕೆನಡಾ ಪ್ರಧಾನಿ ಮಾಡಿದ ಆರೋಪಗಳು ನಿರಾಧಾರ ಎಂದೂ ಹೇಳಿದೆ’ ಎಂದಿದ್ದಾರೆ.
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಸ್ವತಃ ಅಮೆರಿಕವೇ ಕೆನಡಾಕ್ಕೆ ರಹಸ್ಯ ಮಾಹಿತಿ ನೀಡಿತ್ತು. ಜೊತೆಗೆ ಖಲಿಸ್ತಾನಿ ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದಲ್ಲಿನ ಹಲವು ಖಲಿಸ್ತಾನಿಗಳಿಗೆ ಅಮೆರಿಕದ ಗುಪ್ತಚರ ಸಂಸ್ಥೆ ಎಫ್ಬಿಐ ಮುನ್ನೆಚ್ಚರಿಕೆ ನೀಡಿತ್ತು, ಇದರ ಬೆನ್ನಲ್ಲೇ ಜೈಶಂಕರ್-ಬ್ಲಿಂಕನ್ ಭೇಟಿ ನಡೆದಿದೆ.