ಕಠ್ಮಂಡು: ನೇಪಾಳದ ರುಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ, ಕನಿಷ್ಠ 300 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾಹಿತಿ ನೀಡಿದ್ದಾರೆ.

ಕಠ್ಮಂಡುವಿನಲ್ಲಿ ಮಾತನಾಡಿದ ಖನಾಲ್, ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳದಲ್ಲಿ ಸಂಭವಿಸಿದ ದಿಢೀರ್‌ ಪ್ರವಾಹದಿಂದಾಗಿ ಕ್ಷಣಾರ್ಧದಲ್ಲಿ ಸಾಲು ಸಾಲು ನಗರಗಳೇ ಕೊಚ್ಚಿಹೋಗಿವೆ. ರಸುವಾ ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ ಈವರೆಗೆ 160ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸಾವಿರಾರು ಜನ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಾವಿರಾರು ಕುಟುಂಬಗಳು ತಮ್ಮ ಮನೆಗಳನ್ನು ಕಳೆದುಕೊಂಡಿವೆ. ಹಲವರು ನಾಪತ್ತೆಯಾಗಿದ್ದಾರೆ. ಈ ಭೀಕರ ದುರಂತದ ಸಂಪೂರ್ಣ ಹಾನಿಯ ಪ್ರಮಾಣವನ್ನು ತಿಳಿದುಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ. ಈ ಆಕಸ್ಮಿಕ ಘಟನೆಯಲ್ಲಿ ಕನಿಷ್ಠ 300 ಭಾರತೀಯರು ನಾಪತ್ತೆಯಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಾನಸ ಸರೋವರ ಯಾತ್ರಿಕರು ಎಂದೂ ಸಚಿವರು ದೃಢಪಡಿಸಿದ್ದಾರೆ.

‌ಅವರೊಂದಿಗೆ ಒಟ್ಟಾರೆ ಸುಮಾರು 500 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ. ಭಾರತ ಸರ್ಕಾರ ಹಾಗೂ ಇತರ ದೇಶಗಳ ರಾಯಭಾರ ಕಚೇರಿಗಳೊಂದಿಗೆ ನೇಪಾಳ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಪ್ರತಿಯೊಬ್ಬರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ನೇಪಾಳಿ ನಾಗರಿಕರ ಸುರಕ್ಷತೆ ಮತ್ತು ಕ್ಷೇಮಕ್ಕೆ ನಾವು ಎಷ್ಟು ಬದ್ಧರಾಗಿದ್ದೇವೆಯೋ, ವಿದೇಶಿ ಪ್ರಜೆಗಳ ಸುರಕ್ಷತೆಗೂ ಅಷ್ಟೇ ಬದ್ಧರಾಗಿದ್ದೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ದುರಂತ ಸಂಭವಿಸಿದ ತಕ್ಷಣವೇ, ತುರ್ತು ನೆರವು ಮತ್ತು ಪರಿಹಾರ ಸಾಮಗ್ರಿ ಕಳುಹಿಸಿಕೊಟ್ಟ ಭಾರತ ಸರ್ಕಾರಕ್ಕೆ ಸಚಿವ ಖನಾಲ್ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ನೇಪಾಳದ ಪ್ರವಾಸೋದ್ಯಮವೇ ದೇಶದ ಬೆನ್ನೆಲು. ಹಾಗಾಗಿ ಪ್ರಪಂಚದಾದ್ಯಂತದ ಪ್ರವಾಸಿಗರು ನೇಪಾಳಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ.

ಪೋಖರಾ ಮತ್ತು ಎವರೆಸ್ಟ್ ಪ್ರದೇಶಗಳು ಸೇರಿದಂತೆ ದೇಶದ ಶೇ 80ಕ್ಕೂ ಪ್ರವಾಸಿ ತಾಣಗಳು ಸಂಪೂರ್ಣ ಸುರಕ್ಷಿತವಾಗಿವೆ ಹಾಗು ಅವು ಎಂದಿನಂತೆ ಪ್ರವಾಸಿಗರಿಗೆ ಮುಕ್ತವಾಗಿವೆ ಎಂದೂ ಅವರು ತಿಳಿಸಿದ್ದಾರೆ.