ಲಖನೌ: ಉತ್ತರ ಪ್ರದೇಶದ ಫತೇಫುರ್ ನಲ್ಲಿ ವ್ಯಕ್ತಿಯೋರ್ವ 2 ತಿಂಗಳ ಅವಧಿಯಲ್ಲಿ 5 ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದು, ಚೇತರಿಸಿಕೊಂಡಿದ್ದಾರೆ.
ವೈದ್ಯಕೀಯ ಲೋಕಕ್ಕೂ ಈ ವ್ಯಕ್ತಿ ಚೇತರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಹಾವುಗಳ ಕಡಿತಕ್ಕೊಳಗಾಗಿದ್ದ ವಿಕಾಸ್ ದುಬೆ ಎಂಬಾತ ತನ್ನ ಮನೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದ.
ಆದರೆ ಅಲ್ಲಿಯೂ ಆತನಿಗೆ ಹಾವುಗಳ ಕಾಟ ಮುಂದುವರೆದಿದೆ. ವಿಕಾಸ್ ದುಬೆಗೆ ಜೂ.02 ರಂದು ರಾತ್ರಿ ಮೊದಲ ಬಾರಿಗೆ ಹಾವು ಕಚ್ಚಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ಆತ 2 ದಿನಗಳ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿದ್ದ. ಇದಾದ ಬಳಿಕ ಜೂ.10 ರಂದು ಮತ್ತೊಮ್ಮೆ ಹಾವು ಕಚ್ಚಿತ್ತು, ಮತ್ತೆ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದ ಆತ ಈ ಬಾರಿ ಹಾವುಗಳ ಬಗ್ಗೆ ಎಚ್ಚರದಿಂದ ಇರತೊಡಗಿದ.
7 ದಿನಗಳ ನಂತರ ಜೂ.17 ರಂದು ಮತ್ತೊಮ್ಮೆ ಹಾವು ಕಡಿತಕ್ಕೆ ಒಳಗಾಗಿ ಪ್ರಜ್ಞಾಹೀನನಾಗಿದ್ದ. ಮತ್ತೆ 4 ನೇ ಬಾರಿಯೂ ಈ ಘಟನೆ ಪುನರಾವರ್ತನೆಯಾದ ಹಿನ್ನೆಲೆಯಲ್ಲಿ ಆತನನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿಯೂ ಇದೇ ಘಟನೆ ನಡೆದಿದೆ. ವಿಕಾಸ್ ದುಬೆಗೆ ಚಿಕಿತ್ಸೆ ನೀಡಿದ ವೈದ್ಯ ಜವಾಹರ್ ಲಾಲ್, ಈ ಪ್ರಕರಣವನ್ನು “ವಿಚಿತ್ರ” ಎಂದು ಹೇಳಿದ್ದಾರೆ.