ಅಹಮದಾಬಾದ್: ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಗುಜರಾತ್‌ನಲ್ಲಿರುವ 188 ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ  ಅಡಿಯಲ್ಲಿ ಪೌರತ್ವ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಓಲೈಕೆಯ ರಾಜಕಾರಣ ನೀತಿಯಿಂದಾಗಿ ನಿರಾಶ್ರಿತರಿಗೆ ಪೌರತ್ವ ನೀಡಲು ಹಿಂದೇಟು ಹಾಕಿತ್ತು ಎಂದು ಕಿಡಿಕಾರಿದರು.

ಬಾಂಗ್ಲಾದೇಶ ವಿಭಜನೆಯಾದಾಗ ಅಲ್ಲಿ ಶೇಕಡಾ 27 ರಷ್ಟು ಹಿಂದೂಗಳಿದ್ದರು, ಇಂದು ಶೇಕಡಾ 9 ರಷ್ಟು ಇದ್ದಾರೆ. ಇಷ್ಟು ಹಿಂದೂಗಳು ಎಲ್ಲಿಗೆ ಹೋಗಿದ್ದಾರೆ. ಅವರನ್ನು ನೆರೆಯ ದೇಶದಿಂದ ಹಿಂದೂಗಳು ಎಂದು ಕರೆಯಲಾಯಿತು. ನಾವು 2019 ರಲ್ಲಿ ಸಿಎಎ ತಂದಿದ್ದೇವೆ. ಸಿಎಎ ಕಾನೂನಿಂದಾಗಿ ಕೋಟ್ಯಂತರ ಹಿಂದೂಗಳು, ಜೈನರು ಮತ್ತು ಸಿಖ್ ಧರ್ಮದ ಜನರು ಭಾರತೀಯ ಪೌರತ್ವವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಕೆಲವು ರಾಜಕೀಯ ಪಕ್ಷಗಳು ಸಿಎಎ ವಿಚಾರವನ್ನು ಇಟ್ಟುಕೊಂಡು ಮುಸ್ಲಿಮರನ್ನು ಹಿಂಸೆಗೆ ಪ್ರಚೋದಿಸುತ್ತಿದೆ. ಕೆಲವು ರಾಜ್ಯ ಸರ್ಕಾರಗಳು ಕೂಡ ಇದೇ ವಿಚಾರವಾಗಿ ಜನರನ್ನು ದಾರಿ ತಪ್ಪಿಸುತ್ತಿವೆ. ಭಾರತ ಒಕ್ಕೂಟ ಮತ್ತು ಕಾಂಗ್ರೆಸ್ ಸಿಎಎಗೆ ಸಂಬಂಧಿಸಿದಂತೆ ನಿರಾಶ್ರಿತರನ್ನು ದಾರಿ ತಪ್ಪಿಸುತ್ತಿವೆ ಎಂದು ಕಿಡಿಕಾರಿದರು.