ಪಶ್ಚಿಮ ಬಂಗಾಳ: ತ್ರಿಣಮೂಲ ಕಾಂಗ್ರೆಸ್ ಅಧ್ಯಕ್ಷೆ ಹಾಗು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಹೋದರ ಬಬುನ್ ಬ್ಯಾನರ್ಜಿಯೊಂದಿಗಿನ ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಹೌರಾ ಲೋಕಸಭಾಕ್ಷೇತ್ರ ಅಭ್ಯರ್ಥಿ ಆಯ್ಕೆಯೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.
ಈ ಮೊದಲು ಕೊರೋನಾ ಸಮಯದಲ್ಲೂ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಮನೆಯವರಿಗೆ ಕೋವಿಡ್ ಸೋಂಕು ತಗುಲಿದ್ದರೂ ಹೊರಗೆ ಸುತ್ತಾಡುತ್ತಿದ್ದ ಕಿರಿಯ ಸಹೋದರನಿಗೆ ಸಾರ್ವಜನಿಕವಾಗಿ ಎಚ್ಚರಿಸಿದ್ದರು. ತಮ್ಮ ಮನೆಯವರೇ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ನೋವನ್ನುಂಟುಮಾಡಿದೆ ಎಂದು ಮಮತಾ ಹೇಳಿದ್ದರು.
ʼಹೌರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾಗಿರುವ ಅಭ್ಯರ್ಥಿ ನನಗೆ ಸರಿಕಾಣುವುದಿಲ್ಲ. ಪ್ರಸುನ್ ಬ್ಯಾನರ್ಜಿ ಸರಿಯಾದ ಆಯ್ಕೆಯಲ್ಲ. ಅವರನ್ನು ಹೊರತುಪಡಿಸಿ ಅನೇಕ ಯೋಗ್ಯ ಅಭ್ಯರ್ಥಿಗಳಿದ್ದರುʼ ಎಂದು ಬಬುನ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಜೊತೆಗೆ ತಾವು ಹೌರಾದಿಂದ ಸ್ವತಂತ್ರ ಅಭ್ಯರ್ತಿಯಾಗಿ ಸ್ಪರ್ಧಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಹೋದರನೊಂದಿಗೆ ಸಂಬಂಧ ಕಡಿದುಕೊಂಡ ಮಮತಾ, ಪ್ರತಿ ಚುನಾವಣೆಯ ಮುಂಚೆ ಸಮಸ್ಯೆ ಸೃಷ್ಟಿಸುವ ದುರಾಸೆ ಬುದ್ಧಿಯ ಜನ ನನಗೆ ಇಷ್ಟವಾಗುವುದಿಲ್ಲ. ಬಬುನ್ಗೆ ಟಿಕೆಟ್ ಕೊಡಿಸಬಲ್ಲ ಕುಟುಂಬ ರಾಜಕಾರಣದಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ ಅವನೊಂದಿಗೆ ನನ್ನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದೇನೆ ಎಂದರು.
ಬಬುನ್ ಬ್ಯಾನರ್ಜಿ ಬಿಜೆಪಿ ಸೇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವನಿಗೆ ಇಷ್ಟವಾಗಿದ್ದನ್ನು ಮಾಡಲಿ. ಪಕ್ಷ ತನ್ನ ಅಧಿಕೃತ ಅಭ್ಯರ್ಥಿ ಪ್ರಸುನ್ ಪರವಾಗಿದೆ ಎಂದರು.