ಕೋಲ್ಕತಾ, ಜ.19: ಪಶ್ಚಿಮ ಬಂಗಾಳದ ಹೊಸ ಜಲ್ಪೈಗುರಿ ರೈಲು ನಿಲ್ದಾಣದದಲ್ಲಿ ವಿದ್ಯುತ್ ಸ್ಪರ್ಶದಿಂದ ಸೇನಾ ಜವಾನ್ ಮೃತಪಟ್ಟಿದ್ದು, ಆತನನ್ನು ರಕ್ಷಿಸುವ ಪ್ರಯತ್ನದಲ್ಲಿ ಅವರ ನಾಲ್ವರು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ.
ಮೃತನನ್ನು ಮನೀಶ್ ಮೆಹ್ತಾ (34) ಎಂದು ಗುರುತಿಸಲಾಗಿದೆ. ಗಾಯಗೊಂಡ ನಾಲ್ವರು ಜವಾನರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಬೆಳಿಗ್ಗೆ 9 ಗಂಟೆ ಸುಮಾರಿಗೆ ನೀರಿನ ಟ್ಯಾಂಕ್ ಹೊಂದಿರುವ ಸೇನಾ ಟ್ರಾಲರ್ ನಿಲ್ದಾಣವನ್ನು ಪ್ರವೇಶಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಟ್ಯಾಂಕ್ ಗಳಲ್ಲಿನ ನೀರಿನ ಪ್ರಮಾಣವನ್ನು ಅಳೆಯಲು ಕೆಲವು ಜವಾನರು ಟ್ರಾಲರ್ ನ ಛಾವಣಿಯನ್ನು ಹತ್ತಿದರು. “ಆ ವೇಳೆ, ಜವಾನರಲ್ಲಿ ಒಬ್ಬರು ಆಕಸ್ಮಿಕವಾಗಿ ಓವರ್ಹೆಡ್ ತಂತಿಯ ಸಂಪರ್ಕಕ್ಕೆ ಬಂದರು. ಅವನನ್ನು ಉಳಿಸಲು ಪ್ರಯತ್ನಿಸುವಾಗ ಇತರರು ಸಹ ಗಾಯಗೊಂಡರು. ಅವರೆಲ್ಲರನ್ನೂ ತಕ್ಷಣ ರೈಲ್ವೆ ಇಲಾಖೆಯ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಇಲಾಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಶಾನ್ಯ ರೈಲ್ವೆ ಪಿಆರ್ಒ ಸಬ್ಯಸಾಚಿ ಡೇ ಅವರ ಪ್ರಕಾರ, ಈ ವಿಷಯ ದುರದೃಷ್ಟಕರವಾಗಿದ್ದರೂ, ನೀರಿನ ಪ್ರಮಾಣವನ್ನು ಅಳೆಯಲು ಟ್ರಾಲರ್ ಏರುವ ಪ್ರಯತ್ನವು ಅನಗತ್ಯವಾಗಿತ್ತು. “ಹೆಚ್ಚಿನ ನೀರಿನ ಅಗತ್ಯವಿದ್ದರೆ ಜವಾನರು ತಕ್ಷಣ ರೈಲ್ವೆ ಪ್ರಾಧಿಕಾರಕ್ಕೆ ತಿಳಿಸಬಹುದಿತ್ತು” ಎಂದು ಅವರು ಹೇಳಿದರು.