ಲಕ್ನೋ: ಉತ್ತರ ಪ್ರದೇಶದಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವೀರ್ ಸಾವರ್ಕರ್ ಅವರ ಜೀವನ ಚರಿತ್ರೆ ಅಧ್ಯಯನ ಕಡ್ಡಾಯವಾಗಿರಲಿದೆ. ಸಾವರ್ಕರ್ ಅಲ್ಲದೇ 50 ಮಹಾಪುರುಷರ ಜೀವನದ ಅಧ್ಯಾಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.
ಅವರಲ್ಲಿ ದೀನ್ ದಯಾಳ್ ಉಪಾಧ್ಯಾಯ, ಮಹಾವೀರ್ ಜೈನ್, ಪಂಡಿತ್ ಮದನ್ ಮೋಹನ್ ಮಾಳವೀಯ, ಅರವಿಂದ್ ಘೋಷ್, ರಾಜಾ ರಾಮ್ ಮೋಹನ್ ರಾಯ್, ಸರೋಜಿನಿ ನಾಯ್ಡು, ನಾನಾ ಸಾಹೇಬ್, ಚಂದ್ರಶೇಖರ್, ರಾಮಕೃಷ್ಣ ಪರಮಹಂಸರ ಪಠ್ಯಗಳು ಸೇರಿವೆ. ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಶಿಕ್ಷಣ ಸಚಿವ ಗುಲಾಬ್ ದೇವಿ ಮಾತನಾಡಿ, ರಾಷ್ಟ್ರ ನಾಯಕರ ಪಠ್ಯಕ್ರಮ ಓದಿನಿಂದ ಮಕ್ಕಳಲ್ಲಿ ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದ್ದಾರೆ.
ವಿರೋಧಪಕ್ಷಗಳು ಪಠ್ಯಕ್ರಮ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿವೆ. ಏತನ್ಮಧ್ಯೆ, ವೀರ್ ಸಾವರ್ಕರ್ ಅವರ ಅಧ್ಯಾಯವನ್ನು ಸೇರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಮಾಜವಾದಿ ಪಕ್ಷ (ಎಸ್ಪಿ) ಯುಪಿ ಸರ್ಕಾರವನ್ನು ಕೇಳಿದೆ. ಎಸ್ಪಿ ವಕ್ತಾರ ಸುನೀಲ್ ಸಾಜನ್ ಮಾತನಾಡಿ, ಬ್ರಿಟಿಷರ ಕ್ಷಮೆಯಾಚಿಸುವ ಮೂಲಕ ದೇಶಪ್ರೇಮಿಗಳ ಭಾವನೆಗಳಿಗೆ ದ್ರೋಹ ಬಗೆದ ವೀರ ಸಾವರ್ಕರ್ ಅವರ ಪಠ್ಯವನ್ನು ಸೇರಿಸಿಕೂಡದು ಎಂದು ಹೇಳಿದ್ದಾರೆ.