ಅಯೋಧ್ಯಾ, ಅ.18: ದೀಪಾವಳಿ ಮುನ್ನಾ ದಿನವಾದ ಅಕ್ಟೋಬರ್ 23ರಂದು ‘ರಾಮ್ ಕಿ ಪೈಡಿ’ ಘಾಟ್ನಲ್ಲಿ ನಡೆಯಲಿರುವ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ, ಪ್ರಧಾನಮಂತ್ರಿಯವರು ಭಾನುವಾರ ಸಂಜೆ 5 ಗಂಟೆಗೆ ರಾಮ್ ಲಲ್ಲಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ನಡೆಯುತ್ತಿರುವ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಸಹ ಪರಿಶೀಲಿಸಲಿದ್ದಾರೆ.
ಇದರ ನಂತರ ಸಂಜೆ 6.30ರ ಸುಮಾರಿಗೆ ಹೊಸ ಸರಯೂ ಘಾಟ್ ನಲ್ಲಿ ಆರತಿ ನಡೆಯಲಿದೆ. ನಂತರ ಅವರು ರಾಮ್ ಕಿ ಪೈಡಿ ಘಾಟ್ ನಲ್ಲಿ ದೀಪೋತ್ಸವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ, ಅದರ ನಂತರ ಹೊಸ ಸರಯೂ ಘಾಟ್ ನಲ್ಲಿ ಹಸಿರು ಡಿಜಿಟಲ್ ಪಟಾಕಿಗಳು ಇರಲಿವೆ.
ಕಳೆದ ವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ಭವ್ಯ ದೀಪೋತ್ಸವ ಆಚರಣೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ಅದಕ್ಕಾಗಿ ಲಾಂಛನವನ್ನು ಬಿಡುಗಡೆ ಮಾಡಿದರು.
ಯೋಗಿ ಆದಿತ್ಯನಾಥ್ ಮಂಗಳವಾರ ಮತ್ತೆ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಈ ವರ್ಷ, ಉತ್ತರ ಪ್ರದೇಶ ಸರ್ಕಾರವು ತನ್ನ ಹಿಂದಿನ ವರ್ಷದ ಒಂಬತ್ತು ಲಕ್ಷ ದಾಖಲೆಯನ್ನು ಮುರಿಯಲು ಏಕಕಾಲದಲ್ಲಿ ದಾಖಲೆಯ 15 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಗುರಿಯನ್ನು ಹೊಂದಿದೆ.