ಲಖನೌ: ದಕ್ಷತೆಯನ್ನು ಸುಧಾರಿಸಲು ಮತ್ತು ಅಧಿಕಾರಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಉತ್ತರ ಪ್ರದೇಶ ಸರ್ಕಾರವು ವಾರಕ್ಕೊಮ್ಮೆ ಅವರಿಗಾಗಿ ಆಧ್ಯಾತ್ಮಿಕ ಉಪನ್ಯಾಸ ಸೆಷನ್ ಗಳನ್ನು ನಡೆಸಲಿದೆ.
ರಾಜ್ಯ ಸರ್ಕಾರ ಈಗಾಗಲೇ ಸಿಸ್ಟರ್ ಬಿ.ಕೆ.ಶಿವಾನಿ ಅವರನ್ನು ಆಹ್ವಾನಿಸಿದ್ದು, ಅವರು ಶುಕ್ರವಾರ ಲೋಕಭವನದಲ್ಲಿ ‘ಕಾರ್ಯ ಕ್ಷಮ್ತಾ ವೃಧಿ ವ್ಯಾಖ್ಯನ್ ಮಾಲಾ’ (ಕೆಲಸದ ದಕ್ಷತೆಯಲ್ಲಿ ಸುಧಾರಣೆ ಕುರಿತ ಉಪನ್ಯಾಸ ಸರಣಿ) ಅಡಿಯಲ್ಲಿ ಉಪನ್ಯಾಸ ನೀಡಲಿದ್ದಾರೆ.
ಬಿ.ಕೆ. ಶಿವಾನಿ ಅವರು ಬ್ರಹ್ಮ ಕುಮಾರಿ ವಿಶ್ವ ಆಧ್ಯಾತ್ಮಿಕ ಸಂಸ್ಥೆಗೆ ಸೇರಿದವರು.
ಸಚಿವಾಲಯದ ಆಡಳಿತ ವಿಭಾಗದ (ಎಸ್ಎಡಿ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಮಂತ್ ರಾವ್ ಅವರು ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು, ಆಯಾ ಇಲಾಖೆಯ ಇತರ ಅಧಿಕಾರಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಉಜ್ವಲ ಭವಿಷ್ಯಕ್ಕಾಗಿ ಸ್ಫೂರ್ತಿ ನೀಡುವುದು, ಒತ್ತಡ ಮತ್ತು ದುಃಖಗಳನ್ನು ತೊಡೆದುಹಾಕುವುದು, ಆಧ್ಯಾತ್ಮಿಕತೆ ಮತ್ತು ವಿಜ್ಞಾನದ ನಡುವಿನ ಸಮನ್ವಯದೊಂದಿಗೆ ಕುಟುಂಬ ಜೀವನವನ್ನು ನಡೆಸುವುದು ಮತ್ತು ಸಮಾಜದಲ್ಲಿ ಬದುಕುವುದು ಈ ಭಾಷಣ ಕಾರ್ಯಕ್ರಮದ ಉದ್ದೇಶವಾಗಿದೆ. ಇದು ನಮ್ಮ ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ ಮತ್ತು ಗುಣಮಟ್ಟದಲ್ಲಿ ಸುಧಾರಣೆ ತರುತ್ತದೆ” ಎಂದು ರಾವ್ ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ದಕ್ಷತೆಯನ್ನು ತರಲು ಇತ್ತೀಚೆಗೆ ಪ್ರಾರಂಭಿಸಲಾದ ಉಪನ್ಯಾಸ ಸರಣಿಯಲ್ಲಿ ಇದು ಎರಡನೇ ಕಾರ್ಯಕ್ರಮವಾಗಿದೆ.