ಲಕ್ನೋ: ಸನಾತನ ಧರ್ಮ’ದ ವಿರುದ್ಧದ ಷಡ್ಯಂತ್ರ ನಡೆಸುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಕುತಂತ್ರವನ್ನು ಬಹಿರಂಗಪಡಿಸಲು ಅಖಿಲ ಭಾರತೀಯ ಸಂತ ಸಮಿತಿಯು ವಾರಣಾಸಿಯಲ್ಲಿ ನವೆಂಬರ್ 2 ರಿಂದ ಮೂರು ದಿನಗಳ ಸಾಂಸ್ಕೃತಿಕ ಸಂಸದ್ ಆಯೋಜಿಸಲಿದೆ ಎಂದು ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರಾನಂದ ಸರಸ್ವತಿ ತಿಳಿಸಿದ್ದಾರೆ.
ಲಕ್ನೋದಲ್ಲಿ ಭಾನುವಾರ ವೇದಾಂತ್ ಸತ್ಸಂಗ ಆಶ್ರಮದಲ್ಲಿ ನಡೆದ ಅಖಿಲ ಭಾರತೀಯ ಸಂತ ಸಮಿತಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಸಂಸದ್ ಅನ್ನು ಆಯೋಜಿಸುವ ಪ್ರಸ್ತಾಪವನ್ನು ಅಂಗೀಕರಿಸಿತು. ಈ ಸಭೆಯಲ್ಲಿ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ದಾರ್ಶನಿಕರು ಭಾಗವಹಿಸಲಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮಹಾ ರುದ್ರಾಭಿಷೇಕದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಜಿತೇಂದ್ರಾನಂದ ಸರಸ್ವತಿ ತಿಳಿಸಿದರು.
ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ ನೇತೃತ್ವದಲ್ಲಿ ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಪಿತೂರಿಯನ್ನು ಬಹಿರಂಗಪಡಿಸಲು ಸಂಸದ್ ಅನ್ನು ಆಯೋಜಿಸಲಾಗಿದೆ. ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್, ಉತ್ತರ ಪ್ರದೇಶದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ತಮಿಳುನಾಡಿನ ಉದಯನಿಧಿ ಸ್ಟಾಲಿನ್ ಸೇರಿದಂತೆ ಭಾರತೀಯ ರಾಜಕಾರಣಿಗಳು ಹಿಂದೂ ಧರ್ಮದ ವಿರುದ್ಧದ ಜಾಗತಿಕ ಪಿತೂರಿ ನಡೆಸುತ್ತಿದ್ದಾರೆ. ಈ ಕುರಿತು ಸಂಸದ್ನಲ್ಲಿ ಚರ್ಚೆ ನಡೆಯಲಿದೆ ಎಂದರು.
ಕಾರ್ಯಕ್ರಮದ ನಂತರ, ಸನಾತನ ಧರ್ಮದ ಕುರಿತು ಆಧ್ಯಾತ್ಮಿಕ ಪ್ರವಚನ ನೀಡಲು ನವೆಂಬರ್ 5 ರಿಂದ ದೇಶದಾದ್ಯಂತ ಸುಮಾರು ಐದು ಲಕ್ಷ ಹಳ್ಳಿಗಳಿಗೆ ಸಂತರು ಪರ್ಯಟನೆ ನಡೆಸಲಿದ್ದಾರೆ ಎಂದರು. ಜನವರಿ 15, 2024 ರವರೆಗೆ ಪರ್ಯಟನೆ ಮುಂದುವರಿಯಲ್ಲಿದ್ದು, ನಂತರ ಸಂತರು ಅಯೋಧ್ಯೆಗೆ ರಾಮ ಮಂದಿರದ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.